ರಾಮಚಂದ್ರಾಪುರ-ಶಕಟಪುರ ಸಮಾಗಮ
ಕನ್ನಡಪ್ರಭ ವಾರ್ತೆ ಕಾರವಾರ
ರಾಮಚಂದ್ರಾಪುರ ಮಠ ಹಾಗೂ ಶಕಟಪುರ ಮಠಗಳ ನಡುವೆ ಅದ್ವೈತದ ಬಾಂಧವ್ಯವಿದೆ. ಇದು ರಾಜರಾಜೇಶ್ವರೀ ಅನುಗ್ರಹಿಸಿರುವ ಬಾಂಧವ್ಯ. ಈ ಬಾಂಧವ್ಯಕ್ಕೆ ಅವಳೇ ಸೇತುವೆ. ಎರಡೆಂದು ಕಂಡರೂ ಈ ಪೀಠಗಳು ಒಂದೇ ಎನ್ನುವ ಭಾವವೇರ್ಪಟ್ಟಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಶ್ರೀಗಳು ನುಡಿದರು.ಶಕಟಪುರದ ಶ್ರೀವಿದ್ಯಾಪೀಠದ ಶ್ರೀಕೃಷ್ಣಾನಂದತೀರ್ಥ ಶ್ರೀಗಳು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು.
ಗಿರಿನಗರದ ಮಠಕ್ಕೆ ಆಗಮಿಸಿದ ಶಕಟಪುರದ ಶ್ರೀಗಳಿಗೆ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ವೇದಘೋಷ, ಶಂಖನಾದ, ವಾದ್ಯ, ಪೂರ್ಣಕುಂಭಗಳ ಅದ್ದೂರಿ ಸ್ವಾಗತ ನೀಡಲಾಯಿತು. ಶಕಟಪುರದ ಶ್ರೀಪರಿವಾರದವರನ್ನು ಗೌರವಿಸಲಾಯಿತು.
ಇದೇ ಸಂದರ್ಭ ಹವ್ಯಕ ಮಹಾಮಂಡಲದಿಂದ ಅಯೋಜಿತವಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಉನ್ನತ ವಿದ್ಯಾಭ್ಯಾಸ, ಸಂಗೀತ, ಭರತನಾಟ್ಯ ಮುಂತಾದವುಗಳಿಲ್ಲಿ ವಿಶಿಷ್ಟ ಸಾಧನೆ ಮಾಡಿದ 230 ವಿದ್ಯಾರ್ಥಿಗಳನ್ನು ಶ್ರೀಗಳು ಆಶೀರ್ವದಿಸಿದರು.ಶ್ರೀಮಠದ ವಿತ್ತಾಧ್ಯಕ್ಷ ಗಣೇಶ ಜೆ.ಎಲ್., ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಶ್ರೀರಾಮಾಶ್ರಮ ಅಧ್ಯಕ್ಷ ರಮೇಶ ಹೆಗಡೆ ಕೋರಮಂಗಲ, ಶ್ರೀರಾಮಾಶ್ರಮ ಕಾರ್ಯದರ್ಶಿ ವಾದಿರಾಜ ಸಾಮಗ, ಹವ್ಯಕ ಮಹಾಮಂಡಲದ ಬೆಂಗಳೂರು ಪ್ರಾಂತ್ಯ ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲೆಕೇರಿ, ದಕ್ಷಿಣ ಮಂಡಲ ಅಧ್ಯಕ್ಷ ಎನ್.ಜಿ. ಭಾಗ್ವತ್, ಉತ್ತರ ಮಂಡಲ ಅಧ್ಯಕ್ಷ ಎಲ್.ಆರ್. ಹೆಗಡೆ, ಲೋಕಸಂಪರ್ಕ ಖಂಡದ ಶ್ರೀಸಂಯೋಜಕ ರಾಮಚಂದ್ರ ಭಟ್ ಕೆಕ್ಕಾರು, ಸುಪ್ರಸಾರ ಖಂಡದ ಶ್ರೀಸಂಯೋಜಕಿ ಅಕ್ಷತಾ ಭಟ್ ಮುಂತಾದ ಪದಾಧಿಕಾರಿಗಳು ಹಾಗೂ ಶಕಟಪುರಮಠದ ಪದಾಧಿಕಾರಿಗಳು, ಶ್ರೀಪರಿವಾರದವರು ಉಪಸ್ಥಿತರಿದ್ದರು.