ಬೆಂಗಳೂರು ಉತ್ತರ ವಿವಿಯಿಂದ ಪತ್ರಕರ್ತರಿಗೆ ಕೃತಕ ಬುದ್ದಿಮತ್ತೆ ಕಾರ್ಯಾಗಾರದಲ್ಲಿ ಶಿವಾನಂದ ತಗಡೂರು ಅಭಿಮತ
ಮಾಧ್ಯಮ ಕ್ಷೇತ್ರದಲ್ಲಿ ಸವಾಲಾಗಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ನಾವು ಎಷ್ಟೇ ಅಳವಡಿಸಿಕೊಂಡರೂ ಅದರ ಜತೆಗೆ ನಮ್ಮ ನೈಜಬುದ್ಧಿ ಬಳಸಿಕೊಂಡೇ ವೃತ್ತಿ ಸವಾಲುಗಳನ್ನು ಎದುರಿಸಿ ಈಜಿ ದಡ ಸೇರುವುದು ಇಂದಿನ ಅನಿವಾರ್ಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬೆಂಗಳೂರು ಉತ್ತರ ವಿವಿ ಸಹಯೋಗದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರು ಉತ್ತರ ವಿವಿಯಿಂದ ‘ಮಾಧ್ಯಮ ಮತ್ತು ಕೃತಕ ಬುದ್ದಿ ಮತ್ತೆ’ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದಿನದಿಂದ ದಿನಕ್ಕೆ ಎಐ ಪ್ರಾಬಲ್ಯ ಬೆಳೆಯುತ್ತಿರುವುದು ನಮಗೆ ಸವಾಲಾಗಿದೆ, ಮುಂದಿನ ದಿನಗಳಲ್ಲಿ ಇದರ ಅರಿವಿಲ್ಲದೇ ಮಾಧ್ಯಮ ಕ್ಷೇತ್ರದಲ್ಲಿ ನಾವು ಕೆಲಸ ಮಾಡಲು ಸಾಧ್ಯವೇ ಇಲ್ಲವೆನ್ನುವ ಪರಿಸ್ಥಿತಿ ನಿರ್ಮಾಣದ ಆತಂಕವೂ ಇದೆ ಎಂದರು.ಆಧುನಿಕ ತಂತ್ರಜ್ಞಾನದ ಅರಿವು ಅಗತ್ಯ:
ಕೋಲಾರ ಜಿಲ್ಲೆಯು ಸಾಹಿತಿ ಡಿ.ವಿ.ಜಿ. ಮಾಸ್ತಿ ತವರು ಜಿಲ್ಲೆಯಾಗಿದೆ. ಡಿ.ವಿ.ಜಿ. ಪತ್ರಕರ್ತರ ಸಂಘದ ಸಂಸ್ಥಾಪಕರಾಗಿದ್ದು ಈ ಜಿಲ್ಲೆಯಲ್ಲಿ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಉದಯೋನ್ಮೂಖ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಅನುವು ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಾನಂದ ತಗಡೂರು, ರವಿ ಹೆಗಡೆ ಹಾಗೂ ಪ್ರೊ.ಬಿ.ಕೆ. ರವಿ ಅವರನ್ನು ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಬೆಂಗಳೂರು ವಿವಿ ಪಿಆರ್ಒ ಶ್ರೀನಿವಾಸರಾವ್ ವಹಿಸಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ರಾಜೇಂದ್ರಸಿಂಹ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಶಮ್ಗರ್ ಮತ್ತಿತರರಿದ್ದು, ಕೆ.ವಿ.ನಾಗರಾಜ್ ಪ್ರಾರ್ಥಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪತ್ರಿಕೋದ್ಯಮ ಮದರ್ತೆರೇಸಾ ಕಾಲೇಜಿನ ಎಐ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಡಿಮೆ ವೆಚ್ಚದಲ್ಲಿ ಮಾಹಿತಿ ಕ್ರೋಢಿಕರಣಮಾಧ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿ ಮತ್ತೆ ಕುರಿತು ಚರ್ಚೆ ವಿಶ್ಲೇಷಣೆ ಕಾಲ ಹೋಗಿದ್ದು, ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಬಳಕೆಯಿಂದ ಸಮಯ, ಕೆಲಸದ ಒತ್ತಡ ಕಡಿಮೆಯಾಗಲಿದೆ ಹಾಗೂ ಕಡಿಮೆ ವೆಚ್ಚದಲ್ಲಿ ಮಾಹಿತಿಗಳನ್ನು ಕ್ರೋಢಿಕರಿಸಿಕೊಳ್ಳಬಹುದಾಗಿದೆ ಎಂದು ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಹೇಳಿದರು.