ಅನಪೇಕ್ಷಿತ ಸಂಗತಿಗಳಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ: ಎಸ್.ಆರ್. ಪಾಟೀಲ್

KannadaprabhaNewsNetwork |  
Published : Feb 24, 2025, 12:33 AM IST
ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರ, ಸಂಸ್ಕೃತಿ ಹಾಗೂ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ದೇಶದಲ್ಲಿಯೇ ಉತ್ತಮ ಪ್ರಜೆಗಳಾಗಬೇಕು.

ಬ್ಯಾಡಗಿ: ಯಾವುದೇ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ, ಸಮಾಜದಲ್ಲಿ ಹರಿದಾಡುತ್ತಿರುವ ಅನಪೇಕ್ಷಿತ ದುಷ್ಕೃತ್ಯ ಸಂಗತಿಗಳು ವಿದ್ಯಾರ್ಥಿಗಳ ಮೇಲೆ ಭಾರಿ ಪ್ರಮಾಣದ ದುಷ್ಪರಿಣಾಮ ಬೀರುತ್ತಿದ್ದು, ಈ ಕುರಿತು ಯುವಕರು ಎಚ್ಚರದಿಂದ ಅವಲೋಕಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಬಿಸಲಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ, ಕಾರ್ಮಿಕ ಪದ್ಧತಿ, ಲಿಂಗ ಅಸಮಾನತೆ, ಧಾರ್ಮಿಕ ಸಂಘರ್ಷ ಸೇರಿದಂತೆ ಭಾರತ ದೇಶ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಾಗಲೇ ನಿರ್ಣಾಯಕ ಸಮಯವನ್ನು ತಲುಪಿದ್ದೇವೆ. ಇದರಿಂದ ಯುವಕರ ಭವಿಷ್ಯ ಅಳಿವು ಉಳಿವಿನ ಸ್ಥಿತಿ ತಲುಪಿದ್ದೇವೆ ಎಂದರು.

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರ, ಸಂಸ್ಕೃತಿ ಹಾಗೂ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ದೇಶದಲ್ಲಿಯೇ ಉತ್ತಮ ಪ್ರಜೆಗಳಾಗಬೇಕು. ಹಿರಿಯರಿಗೆ ಗೌರವ ನೀಡುವುದೂ ಸೇರಿದಂತೆ ಶಿಕ್ಷಣದ ಜತೆಗೆ ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು. ಪಾಲಕರೂ ಅಂಕಗಳ ಹಿಂದೆ ಬೀಳದೇ ಶಿಕ್ಷಕರಿಂದ ಬದುಕಿನ ಶಿಕ್ಷಣ ಪಡೆದುಕೊಂಡಲ್ಲಿ ವಿದ್ಯಾರ್ಥಿಯ ಬದುಕು ಹಸನವಾಗಲಿದೆ ಎಂದರು.

ಪರೀಕ್ಷಾ ದಿನಗಳು ಸಮೀಪಿಸುತ್ತಿವೆ, ಮೊಬೈಲ್, ಟಿವಿಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು ಎಂದರು. ಶಿಕ್ಷಕ ರಾಜು ದೇವಗಿರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಆರ್. ಮಠದ ಶಾಲಾ ವರದಿ ಮಂಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಶಂಭಣ್ಣ ಯಲಿಗಾರ, ಗ್ರಾಪಂ ಸದಸ್ಯರಾದ ಷಣ್ಮುಖಪ್ಪ ಮುಚ್ಚಟ್ಟಿ, ಕವಿತಾ ಮುಚ್ಚಟ್ಟಿ, ಮುಖಂಡರಾದ ಬಸಪ್ಪ ಜ್ಯೋತಿ, ಶಂಕ್ರಗೌಡ ಪಾಟೀಲ, ಫಕ್ಕೀರಪ್ಪ ಬಂಗೇರ, ವಸಲಸಾಬ ಹುಲ್ಮನಿ, ನೀಲಪ್ಪ ಗಟ್ಟಿಮನಿ, ಮುಖ್ಯ ಶಿಕ್ಷಕ ಐ.ಬಿ. ಜ್ಯೋತಿ ದಾನಿಗಳನ್ನು ಸನ್ಮಾನಿಸಿದರು. ಶಿಕ್ಷಕಿಯರಾದ ಎ.ಸಿ. ರೂಪಾ, ಎ.ಪಿ. ಪವಾರ, ಮಂಗಳಾ ಕಂಬಿ, ಮಂಜುಳಾ ಶದಿಯಣ್ಣನವರ, ಎಸ್.ಆರ್. ಬಡ್ಡಿಯವರ, ಹೇಮಲತಾ ಕೊರವರ ಉಪಸ್ಥಿತರಿದ್ದರು. ಶಂಕರ ಕಿಚಡಿ ಸ್ವಾಗತಿಸಿದರು. ವಿಜಯ ಶಿಡಗನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶಿವ, ನಂದಿ ಶಿಲಾಮೂರ್ತಿಗಳಿಗೆ ಭವ್ಯ ಸ್ವಾಗತ

ರಾಣಿಬೆನ್ನೂರು: ತಾಲೂಕಿನ ಹೊಸ ಮುಷ್ಟೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ತ್ರಿವೇಣಿ ಸಂಗಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಶಿವ ಮತ್ತು ನಂದಿ ಶಿಲಾಮೂರ್ತಿಗಳಿಗೆ ಭವ್ಯ ಸ್ವಾಗತ ಕೋರಲಾಯಿತು.ಗ್ರಾಮಕ್ಕೆ ಆಗಮಿಸಿದ ದೇವರ ಮೂರ್ತಿಗಳನ್ನು ಪೂರ್ಣಕುಂಭ, ಭಜನೆ, ಬಾಜಾಭಜಂತ್ರಿ, ಸಮಾಳಗಳೊಂದಿಗೆ ಭವ್ಯವಾದ ಮೆರವಣಿಗೆಯ ಮೂಲಕ ಗ್ರಾಮದಲ್ಲಿನ ತ್ರಿವೇಣಿ ಸಂಗಮ ದೇವಸ್ಥಾನಕ್ಕೆ ಕರೆತರಲಾಯಿತು.

ಲಿಂಗದಹಳ್ಳಿಯ ಹಿರೇಮಠದ ವೀರಭದ್ರ ಶಿವಾಚಾರ್ಯರು ನೂತನ ಶಿಲಾಮೂರ್ತಿಗಳಿಗೆ ಜಲಾಧಿವಾಸಿ, ಧ್ಯಾನಾದಿವಾಸ, ಇತರೆ ವಾಸದಂತ ಅನೇಕ ವಿಧಿ- ವಿಧಾನಗಳನ್ನು ನೆರವೇರಿಸಿದರು.ರಾಣಿಬೆನ್ನೂರಿನ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಹಾಗೂ ಗ್ರಾಮಸ್ತರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ