ಮೋದಿ ಪ್ರಧಾನಿ ಬಳಿಕ ಭಾರತ ಆರ್ಥಿಕವಾಗಿ ಸದೃಢ

KannadaprabhaNewsNetwork | Published : Feb 27, 2024 1:38 AM

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಭಾರತ ಆರ್ಥಿಕವಾಗಿ ಸದೃಢವಾಗಿದ್ದು, ವಿಶ್ವದ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ವಿಶ್ವದ ಆರ್ಥಿಕತೆಯಲ್ಲಿ ಭಾರತ 11ನೇ ಸ್ಥಾನದಲ್ಲಿತ್ತು. ಅವರು ಪ್ರಧಾನಿಯಾದ ಬಳಿಕ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಭಾರತ ಬಂದಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಸದೃಢ ಆರ್ಥಿಕ ಶಕ್ತಿಯಾಗಿ 3ನೇ ಸ್ಥಾನಕ್ಕೆ ಬರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಭಾರತ ಆರ್ಥಿಕವಾಗಿ ಸದೃಢವಾಗಿದ್ದು, ವಿಶ್ವದ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಮೋದಿ ಪ್ರಧಾನಿಯಾವುದಕ್ಕೂ ಮುನ್ನ ವಿಶ್ವದ ಆರ್ಥಿಕತೆಯಲ್ಲಿ ಭಾರತ 11ನೇ ಸ್ಥಾನದಲ್ಲಿತ್ತು. ಅವರು ಪ್ರಧಾನಿಯಾದ ಬಳಿಕ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಭಾರತ ಬಂದಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಸದೃಢ ಆರ್ಥಿಕ ಶಕ್ತಿಯಾಗಿ 3ನೇ ಸ್ಥಾನಕ್ಕೆ ಬರಲಿದೆ ಎಂದರು.

ಆರ್ಥಿಕತೆಯ ಹೊಸಯುಗ ಯುವಕರ ಸಾಮ್ರಾಜ್ಯದ ಲಕ್ಷಣ ಎಂದು ಪ್ರಧಾನಿಯವರು ಹೇಳುತ್ತಾರೆ. ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ರೈಲ್ವೆ ಹೆದ್ದಾರಿ ವಿಮಾನ ಮತ್ತು ಜಲಸಂಪರ್ಕ, ಸೇತುವೆಗಳು, ಎಲ್ಲವು ದೇಶದಲ್ಲಿ ಹಿಂದೆಂದು ಕಾಣದ ರೀತಿಯಲ್ಲಿ ಅಭಿವೃದ್ಧಿಗೊಂಡಿದ್ದು, ಮೂಲ ಸೌಕರ್ಯಕ್ಕೆ ಮೋದಿ ಸರ್ಕಾರ ಒತ್ತು ನೀಡಿದ್ದರಿಂದ ದೇಶ ಬಲಿಷ್ಠವಾಗಿದ್ದು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರು ಆಗದ ಅನೇಕ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ಯುವಕರಲ್ಲಿ ಆಶಾಕಿರಣ ಉಂಟುಮಾಡಿದೆ ಎಂದು ಹೇಳಿದರು.

ಆಗುಂಬೆ ಘಾಟಿಯನ್ನು ಅತ್ಯಾಧುನಿಕ ಸುರಂಗ ಮಾರ್ಗವಾಗಿ ಅಥವಾ ಮೇಲ್ಸೇತುವೆ ರೀತಿಯಲ್ಲಿ ಅಭಿವೃದ್ಧಿ ಮಾಡುವ ಬಗ್ಗೆ ಚರ್ಚೆಯಾಗಿದೆ. ನಿತಿನ್ ಗಡ್ಕರಿ ಅವರು ಈ ಬಗ್ಗೆ ಸ್ಪಂದಿಸಿದ್ದಾರೆ. ದೇಶದ ಅತಿ ದೊಡ್ಡ ತೂಗು ಸೇತುವೆಯಲ್ಲಿ ಒಂದಾದ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. 40 ಸಾವಿರ ಒಂದೇ ಭಾರತ ಬೋಗಿಗಳ ನಿರ್ಮಾಣ ದೇಶದಲ್ಲೇ ಆಗುತ್ತಿದ್ದು, ಮೇಕಿಂಗ್ ಇಂಡಿಯಾಗೆ ಒತ್ತು ನೀಡಲಾಗಿದೆ. ಏರ್‌ಪೋರ್ಟ್‌ನಿಂದ ಉದ್ಯೋಗ ಸೃಷ್ಠಿಯಾಗುತ್ತಿದೆ. ನೀವು ತಲೆಯೆತ್ತಿ ಮತ ಕೇಳಲು ಯಾವುದೇ ಸಂಕೋಚ ಪಡಬೇಡಿ, ಮೋದಿ ಸರ್ಕಾರ ಅಷ್ಟೋಂದು ಅಭಿವೃದ್ಧಿ ಕಾರ್ಯ ಮಾಡಿದೆ ಎಂದು ಹೇಳಿದರು.

ಬಿಜೆಪಿಯ ಏಳು ಮೋರ್ಚಾಗಳಲ್ಲಿ ಯುವ ಮೋರ್ಚಾ ಅತ್ಯಂತ ಪ್ರಬಲವಾಗಿ ಪಕ್ಷವನ್ನು ಸಂಘಟಿಸುತ್ತಿದೆ. ವಿಶ್ವದ ಅತಿ ದೊಡ್ಡ ಪಕ್ಷವಾದ ಬಿಜೆಪಿಯಲ್ಲಿ ಯುವ ಮೋರ್ಚಾ ಶಕ್ತಿ ಮಹತ್ವದ ಪಾತ್ರ ವಹಿಸಿದೆ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ನಿರ್ಧಿಷ್ಟ ಗುರಿಯಿಟ್ಟು, ಹಿರಿಯರಿಗೆ ಗೌರವ ಕೊಟ್ಟು ಅವರ ವಿಶ್ವಾಸವನ್ನು ಗಳಿಸಿ, ಬಿಜೆಪಿ ಯುವ ಮೋರ್ಚಾ ಮುಂದೆ ಸಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಮುಖರಾದ ಎಂ.ಬಿ.ಹರಿಕೃಷ್ಣ, ಮೇಘರಾಜ್, ದರ್ಶನ್, ಅರುಣ್‌ ಕುಗ್ವೆ, ಸಂತೋಷ್, ಮತ್ತಿತರರು ಇದ್ದರು.

- - - ಟಾಪ್ ಕೋಟ್‌ ಶೇ.50 ರಷ್ಟು ನಿರುದ್ಯೋಗಿ ಯುವಕರಿಗೆ ಉದ್ಯೋಗವಿರಲಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಉದ್ಯೋಗ ಕ್ಷೇತ್ರದಲ್ಲಿ ಅನುಕೂಲವಾಗಲು ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಕರಪತ್ರ ಹಂಚಲಾಗುತ್ತಿದೆ. ಯುವಕರು ಅದನ್ನು ಒಮ್ಮೆ ನೋಡಿ, ಓದಿ ಅರ್ಥೈಸಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ

- ಬಿ.ವೈ.ರಾಘವೇಂದ್ರ, ಸಂಸದ

- - - -26ಎಸ್‌ಎಂಜಿಕೆಪಿ06:

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.