ಅಗರ ಗ್ರಾಮ ಒಂದು ದೈವಿಕವಾದ ತಾಣ: ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ

KannadaprabhaNewsNetwork | Published : Nov 30, 2024 12:45 AM

ಸಾರಾಂಶ

ಯಳಂದೂರು ತಾಲೂಕಿನ ಅಗರ ಗ್ರಾಮವು ಅನೇಕ ದೇಗುಲಗಳ ಗ್ರಾಮವಾಗಿದೆ. ಇಲ್ಲಿ ಐತಿಹಾಸಿಕ ಹಾಗೂ ಅನೇಕ ಪೌರಾಣಿಕ ದೇಗುಲಗಳಿವೆ. ಇದೊಂದು ದೈವಿಕ ಗ್ರಾಮವಾಗಿದೆ ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು. ಯಳಂದೂರಿನ ಶ್ರೀ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಇತರ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಅಗರ ಗ್ರಾಮವು ಅನೇಕ ದೇಗುಲಗಳ ಗ್ರಾಮವಾಗಿದೆ. ಇಲ್ಲಿ ಐತಿಹಾಸಿಕ ಹಾಗೂ ಅನೇಕ ಪೌರಾಣಿಕ ದೇಗುಲಗಳಿವೆ. ಇದೊಂದು ದೈವಿಕ ಗ್ರಾಮವಾಗಿದೆ ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶ್ರೀ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಸಂಪ್ರೋಕ್ಷಣೆ, ವಿಮಾನಗೋಪುರ ಕಲಶಾರೋಹಣ ಹಾಗೂ ಅಷ್ಟಬಂಧ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದರು. ಅಗರ ಗ್ರಾಮದಲ್ಲಿ ದೈವಿಕ ಶಕ್ತಿ ಇದೆ. ಇಲ್ಲಿ ಅನೇಕ ದೇಗುಲಗಳಿವೆ. ಅಲ್ಲದೆ ಈ ಗ್ರಾಮದಲ್ಲಿ ಅನೇಕ ಪ್ರತಿಭಾವಂತರಿದ್ದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿನ ಸಂಸರವರು ದೇಶ ಕಂಡ ಶ್ರೇಷ್ಠ ನಾಟಕಕಾರಾಗಿದ್ದರು. ಇವರು ರಚಿಸಿದ ನಾಟಕಗಳು ಇಂದಿಗೂ ಪ್ರಸಿದ್ಧಿ ಪಡೆದಿವೆ. ಇಂತಹ ಅನೇಕ ಪ್ರತಿಭಾವಂತರು ಇಲ್ಲಿರುವುದಕ್ಕೆ ದೈವಿಕ ಅನುಗ್ರಹವೂ ಕಾರಣವಾಗಿದೆ. ಇಂತಹ ಗ್ರಾಮದಲ್ಲಿ ಪುರಾತನ ದೇಗುಲವಾದ ಸೋಮೇಶ್ವರ ದೇಗುಲದ ಜೀರ್ಣೋದ್ಧಾರ ಮಾಡಿ ಇದನ್ನು ಜೋಪಾನ ಮಾಡುತ್ತಿರುವ ಕೆಲಸಕ್ಕೆ ಇಲ್ಲಿನ ವಾಸಿಗಳು ಕೈಜೋಡಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಸಾಲೂರು ಬೃಹನ್ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅಗರ ಹಾಗೂ ಮಲೆ ಮಹದೇಶ್ವರ ದೇಗುಲಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಪಂಚಲಿಂಗಗಳ ದೇಗುಲಗಳಿವೆ. ಮುಂದಿನ ದಿನಗಳಲ್ಲಿ ಇಲ್ಲಿ ಪಂಚಲಿಂಗ ದರ್ಶನವನ್ನು ಮಾಡುವ ಎಲ್ಲಾ ಅವಕಾಶಗಳೂ ಇವೆ ಎಂದರು. ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ದೇವರ ಮೂರ್ತಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವೇದ ಪಾರಾಯಣ, ಅಷ್ಟಬಂಧನದ ಕಲಶ ಪ್ರತಿಷ್ಠಾಪನೆ, ವಿವಿಧ ಹೋಮ ಹವನಗಳೂ ಸೇರಿ ಅನೇಕ ಧಾರ್ಮಿಕ ವಿಧಿಗಳು ನಡೆದವು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮೈಸೂರು ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ ಅಗರ ಗ್ರಾಮದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಅಗರ ಕಲ್ಲುಮಠದ ಸಿದ್ದಮಲ್ಲ ಸ್ವಾಮಿಜಿ, ಕಾರಾಪುರ ಮಠದ ಬಸವರಾಜಸ್ವಾಮಿ ಒಡೆಯರ್, ಮುಡಿಗುಂಡ ಮಠಧ ಶ್ರೀಕಂಠಸ್ವಾಮಿ, ಗೌಡಹಳ್ಳಿ ಮಠದ ಮರಿತೋಂಟದಾರ್ಯಸ್ವಾಮಿ, ಹರವೆ ಮಠದ ಸರ್ಪಭೂಷಣಸ್ವಾಮಿ, ಕುಂತೂರು ಮಠದ ಶಿವಪ್ರಭುಸ್ವಾಮಿ, ಚಿಲಕವಾಗಿ ಮಠದ ಇಮ್ಮಡಿ ಗುರುಲಿಂಗಸ್ವಾಮಿ, ಬಾಲಷಡಕ್ಷರಸ್ವಾಮಿ, ಬಸವಣ್ಣಸ್ವಾಮಿ, ಮಲ್ಲಿನಾಥ ಶಿವಾಚಾರ್ಯಸ್ವಾಮಿ, ಇಮ್ಮಡಿ ಬಸಪ್ಪ ಸ್ವಾಮಿ, ಲಿಂಗರಾಜಸ್ವಾಮಿ, ನಂಜುಂಡಸ್ವಾಮಿ, ಅಗರ ಗ್ರಾಮದ ವೀರಶೈವ-ಲಿಂಗಾಯತ ಸಮಾಜದ ಮುಖಂಡರು, ಗೌಡರು, ಶೆಟ್ಟರು, ಯಜಮಾನರು ಹಾಗೂ ಅಗರ ಗ್ರಾಮಸ್ಥರು ಮತ್ತಿತರರು ಇದ್ದರು.

Share this article