ಅಜೆಕಾರು:ಹೃದಯ ತಪಾಸಣಾ ಉಚಿತ ಬೃಹತ್‌ ಶಿಬಿರ ಸಂಪನ್ನ

KannadaprabhaNewsNetwork | Published : Feb 26, 2024 1:35 AM

ಸಾರಾಂಶ

ಶಿಬಿರದಲ್ಲಿ 750ಕ್ಕೂ ಅಧಿಕ ಶಿಬಿರಾರ್ಥಿಗಳು, 500ಕ್ಕೂ ಅಧಿಕ ಇಸಿಜಿ, 47 ನುರಿತ ವೈದ್ಯರು, 20 ಸಮುದಾಯ ಅಧಿಕಾರಿಗಳು, 100 ಸ್ವಯಂಸೇವಕರು, 30 ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಗ್ರಾಮೀಣ ಪ್ರದೇಶಗಳಲ್ಲಿ ಮಣಿಪಾಲ್ ಆಸ್ಪತ್ರೆಗಳ ಸೇವೆ ಅನನ್ಯವಾಗಿದೆ ಎಂದು ಮಣಿಪಾಲ ವಿಶ್ವ ವಿದ್ಯಾಲಯ ಸಹಕುಲಾಧಿಪತಿ ಡಾ. ಶರತ್ ರಾವ್ ಹೇಳಿದ್ದಾರೆ.ಅಜೆಕಾರು ಶ್ರೀ ರಾಮಮಂದಿರ ಟ್ರಸ್ಟ್, ಅಜೆಕಾರು ಸಾರ್ವಜನಿಕ ಶಾರದಮಹೋತ್ಸವ ಸಮಿತಿ, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್‌ ಸ್ಟೆಪ್‌ ಫೌಂಡೇಶನ್ (ಕ್ಯಾಡ್) ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ನೇತೃತ್ವದಲ್ಲಿ ಭಾನುವಾರ ಅಜೆಕಾರು ರಾಮಮಂದಿರದಲ್ಲಿ ಆಯೋಜಿಸಲಾದ ಬೃಹತ್ ಹೃದಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ‌ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸಕಾಲಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ದೊರಕುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣೆಗಳು ನಡೆಸಿ ಬಡ ಹಾಗೂ ಮಧ್ಯಮ ವರ್ಗಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಮಣಿಪಾಲ ಆಸ್ಪತ್ರೆಗಳು ಆರೋಗ್ಯದ ಕಾಳಜಿಗೆ ಮಹತ್ವ ನೀಡುತ್ತಿವೆ ಎಂದರು.ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ಮಾತನಾಡಿ, ಅಜೆಕಾರು ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡರೆ ರೋಗಿಗಳು ಸಕಾಲ ಚಿಕೆತ್ಸೆಗಳಿಗೆ ದೂರದ ನಗರಗಳಿಗೆ ಅಲೆಯಬೇಕಾಗಿಲ್ಲ ಎಂದರು.

ಶಿಬಿರಗಳಲ್ಲಿ ತೊಡಗಿಸಿಕೊಂಡ ಗ್ರಾಮ‌ ವ್ಯಾಪ್ತಿಗಳ ಎಲ್ಲ ಇಸಿಜಿ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶ್ರಮಿಸಿದ ದಾದಿಯರು ಹಾಗೂ ವೈದ್ಯರ ಸೇವೆಗಳನ್ನು ಕೊಂಡಾಡಿದರು. ಶಿಬಿರ ಆಯೋಜಿಸಿದ ಆಯೋಜಕರಿಗೆ ಧನ್ಯವಾದ ವಿತ್ತರು.ಮಲೇಕಾ ಮಣಿಪಾಲದ ಡೀನ್ ಡಾ. ಉಲ್ಲಾಸ್ ಕಾಮತ್, ಡಾ.ಶರತ್ ರಾವ್ ಅವರನ್ನು ಪರಿಚಯಿಸಿದರು. ಡಾ.ನಿರಂಜನ್, ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ ಬಲ್ಲಾಳ್, ಅಜೆಕಾರು ಶಾರದೋತ್ಸವ ಸಮಿತಿಯ ಸಂದೀಪ್ ಶೆಟ್ಟಿ, ನಡಿಮಾರು ಜಯರಾಜ್ ಹೆಗ್ಡೆ, ಪ್ರದೀಪ್ ಹೆಗ್ಡೆ, ಅಜೆಕಾರು ರಾಮ ಮಂದಿರ ಟ್ರಸ್ಟ್‌ ಅಧ್ಯಕ್ಷ ಪ್ರೇಮಾನಂದ ಶೆಣೈ ಇದ್ದರು.

ಡಾ.ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸುಭಾಶ್ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಪಾಟ್ಕರ್‌ ವಂದಿಸಿದರು.ಶಿಬಿರದಲ್ಲಿ 750ಕ್ಕೂ ಅಧಿಕ ಶಿಬಿರಾರ್ಥಿಗಳು, 500ಕ್ಕೂ ಅಧಿಕ ಇಸಿಜಿ, 47 ನುರಿತ ವೈದ್ಯರು, 20 ಸಮುದಾಯ ಅಧಿಕಾರಿಗಳು, 100 ಸ್ವಯಂಸೇವಕರು, 30 ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article