ಅಕ್ಕಿಆಲೂರಿನ ಸ್ನೇಹ ಮೈತ್ರಿ ಬ್ಲಡ್‌ ಆರ್ಮಿ ರಕ್ತದಾನ ಕ್ರಾಂತಿ

KannadaprabhaNewsNetwork | Published : Jun 13, 2024 12:46 AM

ಅಕ್ಕಿಆಲೂರಿನ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ರಕ್ತದಾನದ ಕ್ರಾಂತಿಯನ್ನೇ ಮಾಡಿದ್ದು, ಈಗ ಜೂನ್ ೧೪ರಂದು ೧೫೦ನೇ ರಕ್ತದಾನ ಶಿಬಿರ ಆಯೋಜಿಸಿದೆಯಲ್ಲದೆ ಮನಗುಂಡಿ ಬಸವಾನಂದ ಶ್ರೀಗಳು ೧೦೨ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಲಿದ್ದು, ಇದು ಅಕ್ಕಿಆಲೂರಿನಲ್ಲಿ ೩೨ನೇ ರಕ್ತದಾನ ಶಿಬಿರವಾಗಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ರಕ್ತ ಸೈನಿಕರ ತವರೂರು ಎಂಬ ಖ್ಯಾತಿ ಪಡೆದ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ರಕ್ತದಾನದ ಕ್ರಾಂತಿಯನ್ನೇ ಮಾಡಿದ್ದು, ಈಗ ಜೂನ್ ೧೪ರಂದು ೧೫೦ನೇ ರಕ್ತದಾನ ಶಿಬಿರ ಆಯೋಜಿಸಿದೆಯಲ್ಲದೆ ಮನಗುಂಡಿ ಬಸವಾನಂದ ಶ್ರೀಗಳು ೧೦೨ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಲಿದ್ದು, ಇದು ಅಕ್ಕಿಆಲೂರಿನಲ್ಲಿ ೩೨ನೇ ರಕ್ತದಾನ ಶಿಬಿರವಾಗಿದೆ.ಕನ್ನಡಪ್ರಭ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಪೊಲೀಸ್ ಕರಬಸಪ್ಪ ಗೊಂದಿ ೨೦೧೧ರಿಂದಲೇ ತಾವು ರಕ್ತದಾನ ಮಾಡಿ, ರಕ್ತದಾನಕ್ಕಾಗಿ ಸಂಘಟನೆ ರೂಪಿಸಿ ಕ್ರಾಂತಿ ಮಾಡಿದ ಫಲ ಈಗ ಹಾನಗಲ್ಲ ತಾಲೂಕಿನ ತುಂಬ ರಕ್ತದಾನಿಗಳು ಸಿಗುತ್ತಿದ್ದಾರೆ. ಕರಬಸಪ್ಪ ಗೊಂದಿ ೧೨೨ ಬಾರಿ, ಮುದ್ರಣಾಲಯ ನಡೆಸುತ್ತಿರುವ ರವಿಚಂದ್ರ ಪುರೋಹಿತ ೫೧ ಬಾರಿ, ರೈಲಿನಲ್ಲಿ ಚಹಾ ಮಾರುವ ಸಂತೋಷ ಸಣ್ಣಲಿಂಗಣ್ಣನವರ ೮೩ ಬಾರಿ, ಹಾವಣಗಿಯ ಶಿಕ್ಷಕ ರವಿ ಮರಳೀಹಳ್ಳಿ ೬೪ ಬಾರಿ, ಅಂಚೆ ನೌಕರ ಶ್ರೀನಿವಾಸ ಬಂಕನಾಳ ೪೬ ಬಾರಿ ರಕ್ತದಾನ ಮಾಡಿದ ಹಾನಗಲ್ಲ ತಾಲೂಕಿನ ನಾಗರಿಕರು ಎಂಬ ಹೆಮ್ಮೆ ಇದೆ. ಈವರೆಗೆ ೫ ಸಾವಿರಕ್ಕೂ ಅಧಿಕ ರಕ್ತದಾನಿಗಳು ೬೭೦೦ ಯುನಿಟ್ ರಕ್ತದಾನ ಮಾಡಿದ್ದಾರೆ.

ಕರ್ನಾಟಕದಲ್ಲಿ ಮೊದಲ ಉಚಿತ ರಕ್ತಸ್ರಾವ ರೋಗಿಗಳ ಆರೈಕೆ ಸದನ ಅಕ್ಕಿಆಲೂರಿನಲ್ಲಿದೆ. ಕರ್ನಾಟಕ ಹಿಮೋಫೀಲಿಯಾ ಸೊಸಾಯಿಟಿ ದಾವಣಗೆರೆ ಇವರು ಇದನ್ನು ನಡೆಸುತ್ತಿದ್ದಾರೆ. ಅಕ್ಕಿಆಲೂರಿನಲ್ಲಿ ಹೆಚ್ಚು ರಕ್ತದಾನಿಗಳಿರುವುದು ಹಾಗೂ ಹೆಚ್ಚು ರಕ್ತದ ಲಭ್ಯತೆಯೂ ಇರುವ ಕಾರಣ ಈ ಸಂಸ್ಥೆ ಇಲ್ಲಿ ಉಚಿತ ರಕ್ತಸ್ರಾವ ರೋಗಗಳ ಆರೈಕೆ ಕೇಂದ್ರ ಆರಂಭಿಸಿದೆ. ಹಾವೇರಿ ಜಿಲ್ಲೆಯ ೨೦೦ಕ್ಕೂ ಅಧಿಕ ತಲಸೀಮಿಯಾ, ಹಿಮೋಫೀಲಿಯಾ, ಸಿಕಲ್ ಸೆಲ್ಸ ಈ ರೋಗಿಗಳು ಇಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾನಗಲ್ಲ ಘಟಕದ ಸಹಯೋಗದಲ್ಲಿ ೨೦೧೯ ರಿಂದ ಈವರೆಗೂ ರಕ್ತದಾನ ಜಾಗೃತಿ ಪ್ರಚಾರಕ್ಕಾಗಿ ಆಯೋಜಿಸಿದ ಬಸ್ ರಕ್ತದಾನ ರಥ ಹಾವೇರಿ ಹಾನಗಲ್ಲ ಸೇರಿದಂತೆ ತಾಲೂಕಿನ ೪೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸುತ್ತದೆ. ಜೂ.೧೪ರಂದು ಇದರ ೫ನೇ ವಾರ್ಷಿಕೋತ್ಸವವಿದೆ. ಅಲ್ಲದೆ ಇದು ಇಡೀ ರಾಜ್ಯದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವೂ ಹೌದು. ಅಲ್ಲದೆ ಈ ಬಸ್‌ಗೆ ಇಂಡಿಯಾ ಬುಕ್‌ಆಫ್ ರೆಕಾರ್ಡ್ಸ ಪ್ರಶಸ್ತಿ ದೊರೆತಿದೆ.ಹಾನಗಲ್ಲ ತಾಲೂಕಿನಲ್ಲಿ ಭಾವೀ ರಕ್ತ ಸೈನಿಕರನ್ನು ಜಾಗೃತಗೊಳಿಸಿದ್ದು, ಇದಕ್ಕಾಗಿ ೧೮ ವರ್ಷದೊಳಗಿನ ೪೬೦೦ಕ್ಕೂ ಅಧಿಕ ಮಕ್ಕಳಿಗೆ ಉಚಿತ ರಕ್ತದ ಗುಂಪು ತಪಸಣಾ ಶಿಬಿರ ನಡೆಸಿ ಅವರಿಗೆ ಮತ್ತು ಅವರ ಪಾಲಕರಿಗೆ ರಕ್ತದಾನ ಜಾಗೃತಿ ಮಾಡಿದೆ. ಇದು ಇನ್ನೂ ಮುಂದುವರೆದಿದೆ. ಹಾವೇರಿ ಜಿಲ್ಲೆಯ ಹಿರಿಯ ರಕ್ತದಾನಿ ೬೪ ವಯಸ್ಸಿನಲ್ಲಿ ರಕ್ತ ಸೈನಿಕ ಮನೋಹರ ಗೊಂದಿ ಮೊದಲ ಬಾರಿಗೆ ರಕ್ತ ದಾನ ಮಾಡಿದ್ದಾರೆ. ರಕ್ತದಾನಕ್ಕಾಗಿ ಕಾರ್ತಿಕೋತ್ಸವಗಳಲ್ಲಿ, ಜಿಲ್ಲಾ ಕಾರಾಗೃಹದಲ್ಲಿ ರಕ್ತದಾನ ಜಾಗೃತಿ, ಮದುವೆ, ನಾಮಕರಣ, ನಿವೃತ್ತಿ ಸಂಭ್ರಮ, ಮನೆಯ ಭೂಮಿ ಪೂಜೆ, ಗೃಹ ಪ್ರವೇಶ, ಜಾತ್ರಾ ಮಹೋತ್ಸವ ಹಾಗೂ ತಾಲೂಕಿನ ೯ ಸರಕಾರಿ ಇಲಾಖೆಯ ನೌಕರರಲ್ಲಿ ರಕ್ತದಾನ ಶಿಬಿರ ನಡೆಸಿ ರಕ್ತ ಪಡೆಯಲಾಗಿದೆ. ಹಾನಗಲ್ಲ ತಾಲೂಕಿನ ೪೬ ಹಳ್ಳಿಗಳಲ್ಲಿ ಈ ವರೆಗೆ ರಕ್ತದಾನ ಶಿಬಿರ ಮಾಡಿದ ಶ್ರೇಯಸ್ಸು ಇಲ್ಲಿದೆ.ಈ ಸಂಸ್ಥೆಯಿಂದ ೪೭೦೦ ರಕ್ತ ದಾನಿಗಳ ರಕ್ತದ ಗುಂಪಿನ ಮಾಹಿತಿ ಸಂಗ್ರಹಿಸಿದ್ದು, ರಕ್ತ ಅವಶ್ಯಕತೆ ಇದ್ದಲ್ಲಿ ಕೂಡಲೆ ಆಯಾ ಸ್ಥಳಕ್ಕೆ ಸಮೀಪದವರನ್ನು ಸಂಪರ್ಕಿಸಿ ರಕ್ತದಾನಕ್ಕೆ ಅವಕಾಶ ಮಾಡಿಕೊಡುವ ವ್ಯವಸ್ಥೆ ಇದೆ. ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಶ್ರೀಗಳು ೧೫ ಬಾರಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು ೧೪ ಬಾರಿ, ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ೧೩ ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಕರ್ನಾಟಕದಲ್ಲಿಯೇ ಅತಿ ಹೆಚ್ಚು ಬಾರಿ ರಕ್ತ ದಾನ ಶಿಬಿರ ಮಾಡಿದ ಪೊಲೀಸ್‌ ಠಾಣೆ ಹಾನಗಲ್ಲ ತಾಲೂಕಿನ ಆಡೂರು ಆಗಿದೆ. ಸತತ ೫ ಬಾರಿ ಶಿಬಿರ ನಡೆಸಲಾಗಿದೆ.ಹಾನಗಲ್ಲ ತಾಲೂಕಿನ ಜಿಮ್ಮಿ ಮತ್ತು ಸಿರಿ ಎಂಬ ನಾಯಿಗಳಿಂದ ರಕ್ತದಾನ ಪಡೆದು, ಜಿಪ್ಸಿ ಮತ್ತು ರಾಕಿ ನಾಯಿಗಳಿಗೆ ಅನಾರೋಗ್ಯಕ್ಕಾಗಿ ಅಕ್ಕಿಆಲೂರಿನ ಪಶು ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಲಾಗಿದೆ. ವಿಶ್ವದ ಮೊದಲ ರಕ್ತದಾನಿಗಳ ತವರೂರು ಎಂಬ ಖ್ಯಾತಿಯನ್ನು ಅಕ್ಕಿಆಲೂರು ಪಡೆದಿದೆ. ಕೋವಿಡ್ ಸಮಯದಲ್ಲಿ ನೂರಕ್ಕೂ ಹೆಚ್ಚು ಜನರಿಂದ ರಕ್ತದಾನ ಮಾಡಿಸಲಾಗಿದೆ.

ಜೂನ್ ೧೪ರಂದು ಅಕ್ಕಿಆಲೂರಿನ ಲಿಂ.ಚನ್ನವೀರೇಶ್ವರ ಶಿವಯೋಗಿಗಳ ಪುಣ್ಯ ಸ್ಮರಣೆ, ಶಿವಬಸವ ಮಹಾಸ್ವಾಮಿಗಳ ಮೌನಾನುಷ್ಠಾನ ಮಂಗಲ, ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ೧೫೦ನೇ ರಕ್ತದಾನ ಶಿಬಿರ ನಡೆಯಲಿದೆ. ಅಲ್ಲದೆ ರಕ್ತದಾನಕ್ಕಾಗಿ ಜಾಣ ಕುರುಡುತನ ಬೇಡ ಎಂಬ ಸಂದೇಶ ಸಾರಲು ೯ ವರ್ಷದ ಹೊಯ್ಸಳ ಕರಬಸಪ್ಪ ಗೊಂದಿ ಕಣ್ಣು ಕಟ್ಟಿಕೊಂಡು ೨ ಕಿಮೀ ಸೈಕಲ್ ನಡೆಸಲಿದ್ದಾರೆ.

ಎಲ್ಲರೂ ರಕ್ತದಾನಿಗಳಾಗಬೇಕು. ರಕ್ತ ಸೈನಿಕರು ಲಾಭಾಪೇಕ್ಷೆ ಇಲ್ಲದೆ ಸಮರ್ಪಣಾ ಭಾವದಿಂದ ರಕ್ತ ನೀಡುತ್ತಿರುವುದೇ ನಿಜವಾಗಿ ರೋಗಿಗಳ ರಕ್ಷಣೆಗೆ ಸಾಧ್ಯವಾಗಿದೆ. ರಕ್ತದಾನದ ಬಗೆಗೆ ಇರುವ ತಪ್ಪು ಕಲ್ಪನೆಯಿಂದ ಹೊರ ಬಂದರೆ ರಕ್ತ ದಾನ ಅಧಿಕಗೊಂಡು ರಕ್ತದ ಕೊರತೆಯಿಂದ ಜೀವ ಕಳೆದುಕೊಳ್ಳುವ ಪ್ರಸಂಗಗಳೇ ಇರುವುದಿಲ್ಲ ಕನ್ನಡಪ್ರಭ ಅಸಮಾನ್ಯ ಕನ್ನಡಿಗ ಕರಬಸಪ್ಪ ಗೊಂದಿ ಹೇಳಿದರು. ರಕ್ತಸ್ರಾವ ರೋಗಿಗಳಿಗೆ ಅತ್ಯಂತ ತುರ್ತು ಸಂದರ್ಭದಲ್ಲಿ ರಕ್ತ ಬೇಕಾಗುತ್ತದೆ. ಅದಕ್ಕಾಗಿ ರಕ್ತ ಸಂಗ್ರಹ ಎಲ್ಲ ಕಡೆ ಬೇಕು. ಜನ ಸ್ವಯಂ ಸ್ಫೂರ್ತಿಯಿಂದ ರಕ್ತದಾನ ಮಾಡುವಂತಾಗಬೇಕು. ಇದು ರಕ್ತದಾನಿಗಳ ಆರೋಗ್ಯಕ್ಕೂ ಒಳ್ಳೆಯದು. ರಕ್ತದಾನದ ಬಗೆಗೆ ಜನರಲ್ಲಿರುವ ತಪ್ಪು ತಿಳುವಳಿಕೆ ಹೋಗಲಾಡಿಸಬೇಕು. ರಕ್ತದಾನ ನಿರಂತರವಾಗಿ ನಡೆಯುವಂತಾದರೆ ರಕ್ತದ ಕೊರತೆ ಇರಲಾರದು ಮಕ್ಕಳು ತಜ್ಞೆ ಡಾ. ಪವಿತ್ರ ಅರುಣಾಚಲಮಠ