ಕನ್ನಡಪ್ರಭ ವಾರ್ತೆ ಬೆಂಗಳೂರು

6 ವರ್ಷದ ವೆನ್ನಿಲಾ ಹತ್ಯೆಗೂ ಮುನ್ನ ತಾಯಿ ಹಾಗೂ ಆಕೆಯ ಪ್ರಿಯಕರನಿಂದ ದೌರ್ಜನ್ಯಕ್ಕೊಳಗಾಗಿರಬಹುದು ಎಂಬ ಅನುಮಾನ ಬಾಣಸವಾಡಿ ಉಪ ವಿಭಾಗದ ಪೊಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ.

ಈ ಶಂಕೆ ಹಿನ್ನಲೆಯಲ್ಲಿ ಹತ್ಯೆಗೂ ಮುನ್ನ ವೆನ್ನಿಲಾ ಯಾವುದಾದರೂ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿರುವ ಬಗ್ಗೆ ಪೊಲೀಸರು ಮಾಹಿತಿ ಶೋಧಿಸುತ್ತಿದ್ದಾರೆ. ಇದುವರೆಗೆ ಮಗು ಹಿಂಸೆಗೆ ತುತ್ತಾಗಿದ್ದ ಬಗ್ಗೆ ಸ್ಪಷ್ಟವಾದ ಪುರಾವೆ ಸಿಕ್ಕಿಲ್ಲ. ಆದರೆ ಈ ನಿಟ್ಟಿನಲ್ಲಿ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್‌ನನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ‘ಸ್ವೇಚ್ಛಾಚಾರದ’ ಬದುಕಿಗೆ ಅಡ್ಡಿಯಾಗಿದ್ದಳು ಎಂದು ವೆನ್ನಿಲಾ ಮೇಲೆ ಆರೋಪಿಗಳಿಗೆ ಸಿಟ್ಟಿತ್ತು. ತಾವು ಮನೆಯಲ್ಲಿ ಮುಕ್ತವಾಗಿ ಖಾಸಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಚಿಕ್ಕ ಮಗು ಆಗಿರುವ ಕಾರಣಕ್ಕೆ ಆಕೆ ಲಾಲನೆ ಪಾಲನೆಗೆ ಪ್ರಿಯಾಂಕ ಗಮನ ಹರಿಸಬೇಕಿತ್ತು. ಮಗಳನ್ನು ಒಬ್ಬಳೇ ಬಿಟ್ಟು ಆಕೆ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತನ್ನ ಸಹನೆಯನ್ನು ಮಗು ಮೇಲೆ ಮೋಹನ್ ತೋರಿಸಿರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಮನೆಯಲ್ಲಿ ಮಗುವಿಗೆ ದೈಹಿಕವಾಗಿ ಹಲ್ಲೆ ನಡೆದಿರುವುದನ್ನು ರುಜುವಾತುಪಡಿಸುವ ಪುರಾವೆಗಳು ಸಿಕ್ಕಿಲ್ಲ. ಮೃತಳ ಸಂಬಂಧಿಕರು ಮೌಖಿಕವಾಗಿ ಹೇಳುತ್ತಾರೆ. ಆದರೆ ಆರೋಪ ಸಾಬೀಪಡಿಸಬೇಕಾದರೆ ಸೂಕ್ತ ಸಾಕ್ಷ್ಯಗಳ ಅಗತ್ಯವಿದೆ. ಈ ಸಲುವಾಗಿಯೇ ವೆನ್ನಿಲಾಳಿಗೆ ಅನಾರೋಗ್ಯ ಸಂಬಂಧ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.

ವೈಟ್‌ಫೀಲ್ಡ್ ಉಪ ವಿಭಾಗಕ್ಕೆ ಆಯುಕ್ತ ಭೇಟಿ


ವೆನ್ನಿಲಾ ಹತ್ಯೆ ಪ್ರಕರಣ ಹಾಗೂ ಎಚ್‌ಎಎಲ್ ಪೊಲೀಸರ ಬಂಧನ ಹಿನ್ನಲೆಯಲ್ಲಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರ ಕಾರ್ಯವೈಖರಿ ಬಗ್ಗೆ ಆಯುಕ್ತ ಬುಧವಾರ ಪರಾಮರ್ಶೆ ನಡೆಸಿದ್ದಾರೆ. ಡಿಸಿಪಿ ಕಚೇರಿಗೆ ತೆರಳಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಸುಮಾರು 2 ತಾಸಿಗೂ ಅಧಿಕ ಹೊತ್ತು ಅಧಿಕಾರಿಗಳ ಜತೆ ಸಮಾಲೋಚಿಸಿದ್ದಾರೆ. ಈ ವೇಳೆ ವೆನ್ನಿಲಾ ಹತ್ಯೆ ಪ್ರಕರಣದ ಪ್ರಾರಂಭದ ತನಿಖೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಲಂಚ ಪಡೆಯುವಾಗ ರಾಜಸ್ಥಾನದಲ್ಲಿ ಎಚ್‌ಎಎಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿತಾ ತಂಡದ ಪೊಲೀಸರ ಬಂಧನ ವಿಚಾರ ಪ್ರಸ್ತಾಪಿಸಿ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸರ್ಕಾರ ಮಾತ್ರವಲ್ಲ ಪೊಲೀಸ್ ಇಲಾಖೆಗೆ ಮರ್ಯಾದೆ ಹೋಗಿದೆ ಎಂದು ಬೇಸರದಿಂದ ಸೀಮಂತ್ ಕುಮಾರ್ ಸಿಂಗ್ ನುಡಿದ್ದಾರೆ ಎಂದು ತಿಳಿದು ಬಂದಿದೆ.