ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುರುಪ್ಪನಪಾಳ್ಯದ ನಿವಾಸಿ ಸೈಯದ್ ವಾಸೀಂ (28) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ಸಮೀರ್ನನ್ನು ಪೊಲೀಸರು ಬಂಧಿಸಿದ್ದಾರೆ.ನಿಮ್ಹಾನ್ಸ್ ಲೇಔಟ್ ಬಳಿ ಮಂಗಳವಾರ ಮಧ್ಯೆ ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಪರಸ್ಪರ ಗೆಳೆಯರು ಬಡಿದಾಡಿಕೊಂಡಿದ್ದಾರೆ. ಈ ಹಂತದಲ್ಲಿ ವಾಸೀಂಗೆ ಸಮೀರ್ ಚಾಕುವಿನಿಂದ ಇರಿದಿದ್ದು, ಇದಕ್ಕೆ ಪ್ರತಿಯಾಗಿ ಸಮೀರ್ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ವಾಸೀಂ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಆರೋಪಿ ಸಮೀರ್ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವಕ್ಕೆ ಕುತ್ತು ತಂದ ಪರ್ಸ್ಸದ್ದುಗುಂಟೆಪಾಳ್ಯದ ಸಮೀಪದ ಖಾಸಗಿ ಗೋದಾಮಿನಲ್ಲಿ ವಾಸೀಂ ಹಾಗೂ ಸಮೀರ್ ಚಾಲಕರಾಗಿದ್ದು, ಐದಾರು ವರ್ಷಗಳಿಂದ ಇಬ್ಬರು ಆತ್ಮೀಯ ಒಡನಾಡಿಗಳಾಗಿದ್ದರು. ಕೆಲಸದ ವೇಳೆ ಸಮೀರ್ಗೆ ವಾಸೀಂ ಕೀಟಲೆ ಮಾಡುತ್ತಿದ್ದ. ಹೀಗೆ ತಮಾಷೆ ಮಾಡಿಕೊಂಡು ಗೆಳೆಯರು ಖುಷಿಯಾಗಿದ್ದರು.
ಅಂತೆಯೇ ಗೆಳೆಯನ ಪರ್ಸ್ ಅನ್ನು ಸೋಮವಾರ ರಾತ್ರಿ ಕಸಿದುಕೊಂಡು ವಾಸೀಂ ಹೋಗಿದ್ದ. ಆ ಪರ್ಸ್ನಲ್ಲಿ ಸಮೀರ್ ಖಾಸಗಿ ಪೋಟೋಗಳಿದ್ದವು. ಈ ಕಾರಣಕ್ಕೆ ಪರ್ಸ್ ತೆಗೆದುಕೊಂಡು ಹೋಗಿದ್ದ ಗೆಳೆಯನ ವಿರುದ್ಧ ಸಮೀರ್ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಿಟ್ಟಿಗೆದ್ದು ಸ್ನೇಹಿತನಿಗೆ ಆತ ಬೈದಿದ್ದ. ಮನೆಗೆ ಹೋದ ಬಳಿಕ ರಾತ್ರಿ ಮತ್ತೆ ಮೊಬೈಲ್ನಲ್ಲಿ ಕಾಲ್ ಮಾಡಿ ಇಬ್ಬರು ಪರಸ್ಪರ ಜಗಳವಾಡಿದ್ದರು. ಈ ವೇಳೆ ಅವಾಚ್ಯ ಶಬ್ಧಗಳ ಬಳಕೆ ಸಹ ಆಗಿದೆ.
ಮರುದಿನ ಬೆಳಗ್ಗೆ ಸಮೀರ್ಗೆ ಕಾಲ್ ಮಾಡಿ ನಿಮ್ಹಾನ್ಸ್ ಲೇಔಟ್ಗೆ ಬಂದರೆ ಪರ್ಸ್ ಕೊಡುತ್ತೀನಿ ಎಂದು ಸಮೀರ್ ಕರೆದಿದ್ದ. ಅಲ್ಲಿಗೆ ಹೋದಾಗ ನನಗೆ ರಾತ್ರಿ ಯಾಕೆ ಬೈದಿದ್ದು ಎಂದು ತಗಾದೆ ತೆಗೆದು ಸಮೀರ್ ಗಲಾಟೆ ಮಾಡಿದ್ದಾನೆ. ಆಗ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರಿದೆ. ಈ ಹಂತದಲ್ಲಿ ಕೆರಳಿದ ಸಮೀರ್, ವಾಸಿಂಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಸಮೀರ್ಗೆ ಕೂಡ ವಾಸೀಂ ಹಲ್ಲೆ ಮಾಡಿದ್ದಾನೆ. ಕೂಡಲೇ ಚಾಕು ಇರಿತಕ್ಕೊಳಗಾಗಿದ್ದ ವಾಸೀಂನನ್ನು ಸಮೀಪದ ಸ್ಥಳೀಯರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
