ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ವಸತಿ ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಗರ್ಭಧಾರಣೆಯಂತ ಗಂಭೀರ ಪ್ರಕರಣ ನಡೆದಾಗಲೂ ಅಸಡ್ಡೆ ತೋರಿದ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಂತೆ ರಾಷ್ಟ್ರೀಯ ಅಂಬೇಡ್ಕರ್‌ ಸೇನೆ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪಂಚಿನ ಮೆರವಣಿಗೆ ನಡೆಸಿ ಆಗ್ರಹಿಸಿತು.

ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಸಚಿವರಾಗಿದ್ದಾಗ. ಅನೇಕ ಕಾನೂನು ಬಾಹಿರ ಪ್ರಕರಣಗಳು ನಡೆದಿದ್ದರೂ ಸಚಿವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅತ್ಯಂತ ಸೂಕ್ಷ್ಮ ಸಂವೇಧನೆಯ ಇಲಾಖೆಯಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸಬೇಕಿತ್ತು. ಆದರೆ, ಸಚಿವರ ನಿರ್ಲಕ್ಷ್ಯತನದಿಂದ ಇಲಾಖೆ ಭ್ರಷ್ಟಾಚಾರದ ಕೂಪವಾಗಿ ಪರಿವರ್ತಿತವಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಎಸ್ಸಿಪಿ, ಟಿಎಸ್‌ಪಿ ಯೋಜನೆಯಡಿ 53 ಸಾವಿರ ಕೋಟಿ ನಿಧಿಯನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕೊಡಲಾಗಿತ್ತು. ಆದರೆ ಸಚಿವರು ಸಮುದಾಯದ ಪರವಾಗಿ ಧ್ವನಿ ಎತ್ತುವಲ್ಲಿ ಸಂಪೂರ್ಣ ವಿಫಲವಾಗಿದ್ದರು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಚ್‌.ರಂಗಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ 70ಕ್ಕೂ ಹೆಚ್ಚು ಗೋಧಿ ಚೀಲಗಳನ್ನು ಕಾನೂನು ಬಾಹಿರವಾಗಿ ಮಣ್ಣಿನಲ್ಲಿ ಹೂತು ಹಾಕಲಾಗಿತ್ತು. ಆದರೆ ಯಾರ ವಿರುದ್ಧವೂ ಕ್ರಮಕೈಗೊಂಡಿರಲಿಲ್ಲ ಎಂದು ಕಿಡಿಕಾರಿದರು.

ಯಾದಗಿರಿ ಮತ್ತು ಚಿಂತಾಮಣಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಮತ್ತು ಗರ್ಭಧಾರಣೆಯಂತ ಗಂಭೀರ ಆಡಳಿತಾತ್ಮಕ ವೈಫಲ್ಯದ ಪ್ರಕರಣಗಳು ಪತ್ತೆಯಾಗಿತ್ತು. ಇದು ಆಡಳಿತದ ವೈಫಲ್ಯ. ಇಲಾಖೆಯಲ್ಲಿ ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ, ಇಡಿ ದಾಳಿ ನಡೆದು ಅಕ್ರಮ ಆಸ್ತಿ ಪತ್ತೆಯಾದರೂ ಉನ್ನತ ಆಡಳಿತವು ಅವರಿಗೆ ಕ್ಷಣೆ ನೀಡಿತ್ತೇ ಹೊರತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ. ಇಂತಹ ಅನೇಕ ಲೋಪಗಳು ಸಮಾಜಕಲ್ಯಾಣ ಇಲಾಖೆಯಲ್ಲಿ ಪತ್ತೆಯಾಗಿದ್ದವು. ಸಮರ್ಪಕ ಮತ್ತು ಉತ್ತಮ ಆಡಳಿತ ನೀಡಲು ವಿಫಲವಾದ ಮಹದೇವಪ್ಪ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.