ಕನ್ನಡ್ರಪಭ ವಾರ್ತೆ ಉಪ್ಪಿನಂಗಡಿ
ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ದೇಶಾದ್ಯಂತದಿಂದ ಕ್ರೀಡಾಳುಗಳು, ಟೀಮ್ ಮೆನೇಜರ್ ಹಾಗೂ ಟೆಕ್ನಿಕಲ್ ತಂಡದವರು ಸೇರಿ ಸುಮಾರು ೧೫೦೦ ಮಂದಿ ಉಪ್ಪಿನಂಗಡಿಗೆ ಆಗಮಿಸಲಿದ್ದಾರೆ. ಒಂದು ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳು ಹಾಗೂ ಇಬ್ಬರು ಟೀಂ ಮ್ಯಾನೇಜರ್ಗಳು ಇರಲಿದ್ದು, ಇವರಿಗೆ ವಸತಿಗಾಗಿ ಈಗಾಗಲೇ ಹಳೆಗೇಟು ಬಳಿಯಿರುವ ಅರಪ್ಫಾ ವಿದ್ಯಾಕೇಂದ್ರ, ಉಪ್ಪಿನಂಗಡಿಯ ಸರ್ಕಾರಿರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಹಿರೇಬಂಡಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ತಾಂತ್ರಿಕ ತಂಡ, ಅಧಿಕಾರಿಗಳಿಗೆ ಉಪ್ಪಿನಂಗಡಿಯ ಎಲ್ಲ ಲಾಡ್ಜ್ಗಳಲ್ಲಿ, ಇಂದ್ರಪ್ರಸ್ಥ ವಿದ್ಯಾಲಯ, ಗಾಣಿಗ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಓಟದ ಮಾರ್ಗಸೂಚಿ: ಮಂಗಳವಾರ ಮಧ್ಯಾಹ್ನ ೨ ಗಂಟೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಿಂದ ಕ್ರೀಡಾ ಜ್ಯೋತಿಯ ಭವ್ಯ ಮೆರವಣಿಗೆ ಕಾಲೇಜು ಕ್ರೀಡಾಂಗಣಕ್ಕೆ ಆಗಮಿಸಲಿದೆ. ಸಂದೆ ೪ ಗಂಟೆಗೆ ಕಾಲೇಜು ಕ್ರೀಡಾಂಗಣದಲ್ಲಿ ಓಟಕ್ಕೆ ಚಾಲನೆ ದೊರೆಯಲಿದೆ.ಕಾಲೇಜು ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿ ೭೫ಕ್ಕೆ ಪ್ರವೇಶಿಸುವ ಕ್ರೀಡಾಪಟುಗಳು ಗಾಂಧಿಪಾರ್ಕ್ ಮೂಲಕ ಬ್ಯಾಂಕ್ ರಸ್ತೆಯಾಗಿ ಬಸ್ ನಿಲ್ದಾಣ ಬಳಿಯ ವೃತ್ತದಿಂದ ತಿರುವು ಪಡೆದು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆದು ಅಲ್ಲಿಂದ ಹಿರೇಬಂಡಾಡಿ ರಸ್ತೆಯ ಮೂಲಕ ಹಿರೇಬಂಡಾಡಿ ಜಂಕ್ಷನ್ ಬಳಿಯಿರುವ ನ್ಯಾಯಬೆಲೆ ಅಂಗಡಿಯವರೆಗೆ ಸಾಗಿ ವಾಪಸ್ ಅದೇ ರಸ್ತೆಯಲ್ಲಿ ತಿರುಗಿ ಬಂದು, ಹೆದ್ದಾರಿ ಪ್ರವೇಶಿಸಿ ಕಾಲೇಜು ಆವರಣಕ್ಕೆ ಬಂದಾಗ ೧೦ ಕಿ.ಮೀ. ದೂರದ ಈ ಓಟವು ಪೂರ್ಣಗೊಳ್ಳಲಿದೆ.
ಕಾಲೇಜಿನಲ್ಲಿಯೂ ಕೂಡಾ ವೇದಿಕೆ, ಕ್ರೀಡಾಂಗಣ ತಯಾರು ಮುಂತಾದ ವ್ಯವಸ್ಥೆಗಳು ಭರದಿಂದ ನಡೆಯುತ್ತಿದ್ದು, ಉಪ್ಪಿನಂಗಡಿಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಾಸ್ ಕಂಟ್ರಿ ರೇಸ್ ನೋಡಲು ಜನತೆ ಕೂಡಾ ಕಾತರದಿಂದ ಕಾಯುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸಲು ಅವಕಾಶ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು, ಊರಿನ ಪ್ರಮುಖರು ಪಕ್ಷಾತೀತವಾಗಿ ಇದರಲ್ಲಿ ಕೈಜೋಡಿಸಬೇಕು. ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಈಗಾಗಲೇ ಭರದ ಸಿದ್ಧತೆ ನಡೆಯುತ್ತಿವೆ. - ಎನ್. ಚಂದ್ರಹಾಸ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೧೯ರಂದು ಸಂಜೆ ೫.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್. ದ.ಕ. ಸಂಸದ ಬ್ರಿಜೇಶ್ ಚೌಟ, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪಿ.ಎಲ್. ಧರ್ಮ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕ್ರೀಡಾಕೂಟದ ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಂ ಕೆ.ವಿ., ಪ್ರಾಂಶುಪಾಲ ಪ್ರೊ. ರವಿರಾಜ್. ಉಪನ್ಯಾಸಕ ಡಾ. ಪ್ರಮೋದ್ ಎಂ.ಜಿ. ಇದ್ದರು.