ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

KannadaprabhaNewsNetwork |  
Published : Feb 06, 2026, 01:30 AM IST
ಪೊಟೊ: 05ಎಸ್‌ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಸೇರಿದಂತೆ ಹಲವಾರು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ-ಜೆಸಿಟಿಯು ಕರ್ನಾಟಕ ವತಿಯಿಂದ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಸೇರಿದಂತೆ ಹಲವಾರು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ-ಜೆಸಿಟಿಯು ಕರ್ನಾಟಕ ವತಿಯಿಂದ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವ್ಯಾಪಾರ ಸಬಲೀಕರಿಸಲು, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲಿಕ್ಕಾಗಿ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ ಎಂದು ದೂರಿದರು.

ಕಾರ್ಖಾನೆಗಳ ವ್ಯಾಖ್ಯಾನದಲ್ಲಿ ಕಾರ್ಮಿಕರ ಮಿತಿ ಹೆಚ್ಚಳದಿಂದ ಗುತ್ತಿಗೆ ಕಾರ್ಮಿಕರ ಪರವಾನಿಗೆಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದಾಗಿ ಶೇ.90ರಷ್ಟು ಕಾರ್ಮಿಕರಿಗೆ ವೇತನ, ಇಎಸ್‌ಐ, ಪಿಎಫ್, ಗ್ರಾಚುಟಿ ಹಾಗೂ ಬೋನಸ್‌ಗಳಿಂದ ಹೊರಗುಳಿಯುತ್ತಾರೆ ಎಂದರು.

ಕಾರ್ಮಿಕರು ಹಕ್ಕೊತ್ತಾಯಗಳು ಈಡೇರದಿದ್ದಾಗ ಮಾಡುತ್ತಿದ್ದ ಮುಷ್ಕರವನ್ನು ಮಾಡಿದರೆ ಅದಕ್ಕೆ ದಂಡ, ಜೈಲು ಮತ್ತು ಅನಿರ್ಧಿಷ್ಟ ವೇತನ ಕಡಿತ ಮಾಡಲಾಗುತ್ತದೆ. 300ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳು ಮಾತ್ರ ಸ್ಥಾಯಿ ಆದೇಶಗಳಿರುತ್ತವೆ. 300 ಕಾರ್ಮಿಕರಿರುವ ಕಾರ್ಖಾನೆಗಳು ಯಾವಾಗ ಬೇಕಾದರೂ ಮುಚ್ಚಿಕೊಂಡು ಹೋಗಲು ಅನುಮತಿ ಕೊಡಲಾಗಿದೆ. ಈ ರೀತಿಯಾಗಿ ಬಂಡವಾಳಗಾರರ ಹಿತ ಕಾಯಲು ಮತ್ತು ಬಂಡವಾಳಗಾರರ ಸಂಪತ್ತನ್ನು ರಕ್ಷಿಸಲು ಪ್ರಬುತ್ವಗಳು ಟೊಂಕಕಟ್ಟಿ ಅನುವು ಮಾಡಿಕೊಡಲಾಗಿದೆ ಎಂದರು.

ರಾಜ್ಯ ಸರ್ಕಾರ ಈ ಕೋಡ್‌ಗಳಿಗೆ ನಿಯಮಾವಳಿ ರಚಿಸಬಾರದೆಂದು ಒತ್ತಾಯಿಸಿದರೂ ಕೂಡಾ ಕಾರ್ಮಿಕ ಸಂಘಟನೆಗಳ ಬಳಿ ಕನಿಷ್ಟ ಚರ್ಚೆ ಮಾಡುವ ಸೌಜನ್ಯ ತೋರಿಸದೆ ನಾಲ್ಕು ಕೋಡ್‌ಗಳಿಗೆ ಗೆಜೆಟ್ ನೋಟಿಫಿಕೇಷನ್ ತಂದು ಕಾರ್ಮಿಕರು ಉಸಿರೆತ್ತದಂತಹ ಪರಿಸ್ಥಿತಿ ನಿರ್ಮಿಸುತ್ತಿದೆ. ನುಡಿದಂತೆ ನಡೆಯುತ್ತಿದೆ ಎಂದು ಹೇಳುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ತರುತ್ತಿರುವ ರೈತವಿರೋಧಿ, ಕಾರ್ಮಿಕ ನೀತಿಗಳನ್ನು ತಾನೂ ಮುಂದುವರಿಸುತ್ತಿದೆ. ಈ ನೀತಿಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿಬಿಜಿ ರಾಮ್-ಜಿ ಕಾಯ್ದೆ ರದ್ದುಗೊಳಿಸಬೇಕು. ಭೂಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ವಿದ್ಯುತ್‌ಶಕ್ತಿ ಖಾಸಗೀಕರಣ ಮಾಡಬಾರದು, ವಿಮಾ ತಿದ್ದುಪಡಿ ಕಾಯ್ದೆ ಮತ್ತು ಶಾಂತಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಫೆ.12ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ ಸಂಘಟನೆಗಳು ಎಲ್ಲಾ ರೈತ ಸಂಘಗಳು, ಕೂಲಿಕಾರ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳು ಸೇರಿ ಶಿವಮೊಗ್ಗದ ಸೈನ್ಸ್ ಮೈದಾನದಿಂದ ಹೊರಟು, ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಎಂ.ನಾರಾಯಣ್ ಮಾತನಾಡಿ, ಫೆ.12ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ನಮ್ಮ ಸಮಿತಿ ಸಂಪೂರ್ಣ ಬೆಂಬಲಿಸಲಿದೆ. ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಜನವಿರೋಧಿ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿದೆ. ಈ ಎಲ್ಲಾ ಜನವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಕೆ.ಎಲ್.ಅಶೋಕ್, ಇಟ್ಟೂರು ರಾಜು, ಕಸೆಟ್ಟಿ ರುದ್ರೇಶ್, ಕೆ.ರಾಘವೇಂದ್ರ, ಹನುಮಮ್ಮ, ಜಿ.ಎನ್.ಷಡಾಕ್ಷರಿ, ಸಿ.ಚಂದ್ರಪ್ಪ, ಜಗದೀಶ್, ರಂಗಸ್ವಾಮಿ, ಷಣ್ಮುಖಪ್ಪ, ಹಾಲೇಶಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ