ಚನ್ನರಾಯಪಟ್ಟಣ: ಎಂ. ಎ. ಗೋಪಾಲಸ್ವಾಮಿ ಬ್ರಿಗೇಡ್ ವತಿಯಿಂದ ಎಂ. ಎ. ಗೋಪಾಲ ಸ್ವಾಮಿಯವರ 55ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅ.4ರಿಂದ 6ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಪುರುಷ ಮತ್ತು ಮಹಿಳಾ ಆಹ್ವಾನಿತ ಹೊನಲು ಬೆಳಕಿನ ಆಲ್ ಇಂಡಿಯಾ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್, ಗಣಪತಿ ಸೇವಾ ಸಮಿತಿ, ಬಿಜಿಎಸ್ ಆಸ್ಪತ್ರೆ ಸಹಯೋಗದಲ್ಲಿ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ನನ್ನ ಹುಟ್ಟುಹಬ್ಬಕ್ಕೆ ಬ್ರಿಗೇಡ್ ವತಿಯಿಂದ ಯುವಕರು ಕಾರ್ಯಕ್ರಮವನ್ನು ಆಯೋಜಿಸಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಅ. 6ರಂದು ಬೆಳಿಗ್ಗೆ 9 ಗಂಟೆಗೆ ತಾಲೂಕಿನ ಜನತೆಗೆ ಬೃಹತ್ ಆರೋಗ್ಯ ಮೇಳವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹೃದ್ರೋಗ ಸಮಸ್ಯೆ, ನರರೋಗ ಸಮಸ್ಯೆ, ಮೂತ್ರಪಿಂಡ ಸಮಸ್ಯೆ, ಮಧುಮೇಹ ಸಮಸ್ಯೆ, ಪಿತ್ತ ಜನಕಾಂಗದ ಸಮಸ್ಯೆ, ಕ್ಯಾನ್ಸರ್ ತಪಾಸಣೆ, ಮಕ್ಕಳ ಚಿಕಿತ್ಸೆ, ವೈದ್ಯಕೀಯ ಶಸ್ತ್ರಚಿಕಿತ್ಸೆ, ಗರ್ಭಿಣಿ ಮತ್ತು ಶ್ರೀ ರೋಗ ಚಿಕಿತ್ಸೆ, ಕೀಲು ಮತ್ತು ಮೂಳೆ, ಕಿವಿ, ಮೂಗು, ಗಂಟಲು, ದಂತ ವೈದ್ಯ ಚಿಕಿತ್ಸೆ, ಕಣ್ಣಿನ ಪರೀಕ್ಷೆ, ಚರ್ಮರೋಗ, ಮಾನಸಿಕ ರೋಗ ಹಾಗೂ ಇನ್ನೂ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆಯನ್ನ ನೀಡಲು ಬೃಹತ್ ಆರೋಗ್ಯ ಮೇಳವನ್ನು ಏರ್ಪಡಿಸಲಾಗಿದೆ.ಸುಮಾರು ಹದಿನೈದಕ್ಕೂ ಹೆಚ್ಚು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದು ಸಾರ್ವಜನಿಕರು, ವಯೋವೃದ್ಧರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಉನ್ನತ ಚಿಕಿತ್ಸೆ ಬೇಕಾದರೆ ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ನೀಡಲಿದ್ದಾರೆ. ಈ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನ ಆತ್ಮೌಷಧ ಭಾರತ ಫೌಂಡೇಶನ್ ಹಾಗೂ ಎಂ.ಎ. ಗೋಪಾಲಸ್ವಾಮಿಯವರ ಅಭಿಮಾನಿ ಬಳಗದ ವತಿಯಿಂದ ನಡೆಸಿಕೊಡಲಿದ್ದಾರೆ ಎಂದರು.
ಅ. 5ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತುಕಾಲಿ ಸಂತೋಷ್, ವರ್ತೂರು ಸಂತೋಷ್, ತನಿಶಾ, ಚಲನಚಿತ್ರ ನಟ ವಿನೋದ್ ಪ್ರಭಾಕರ್ ಸೇರಿದಂತೆ ಇನ್ನೂ ಹಲವಾರು ನಟ ನಟಿಯರು ಆಗಮಿಸಲಿದ್ದು ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಶಿವಲಿಂಗೇಗೌಡ, ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ಸೇರಿದಂತೆ ರಾಜ್ಯದ ನಾನಾ ಭಾಗದ ಶಾಸಕರು, ಸಚಿವರು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.