ಗದಗ: ಕಳೆದ ಹಲವು ವರ್ಷದಿಂದ ನಷ್ಟದಲ್ಲಿಯೇ ಸಾಗುತ್ತಿರುವ ಸಂಘ ಲಾಭದತ್ತ ತರಲು ಪ್ರಯತ್ನಿಸಲಾಗುತ್ತಿದ್ದು, ಸಂಘದ ನಿರ್ದೇಶಕ ಮಂಡಳಿ ಮತ್ತು ಸದಸ್ಯರು ಸಹಕಾರ ನೀಡಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 3ರ ಅಧ್ಯಕ್ಷ ಕಳಕಪ್ಪ ಟೆಂಗಿನಕಾಯಿ ಹೇಳಿದರು.
1940ರಲ್ಲಿ ಸ್ಥಾಪನೆಯಾದ ಸಂಘವು ಹಲವು ಏಳುಬೀಳು ಕಂಡಿದ್ದು, ಇತ್ತೀಚೆಗೆ ಚೇತರಿಕೆಗೊಳ್ಳುವ ಹಂತದಲ್ಲಿದೆ. 2022-23ರಲ್ಲಿ ₹ 4,40,882 ನಷ್ಟದಲ್ಲಿದ್ದ ಸಂಘವು 2023-24ರಲ್ಲಿ ₹ 1,39,131ಗೆ ಇಳಿಕೆಯಾಗಿದ್ದು ಸಂತಸ ತಂದಿದೆ. ಬರುವ ವರ್ಷದಲ್ಲಿ ನಷ್ಟ ಮೀರಿ ಲಾಭದತ್ತ ತರುವ ಪ್ರಯತ್ನ ಮಾಡಲಾಗುವುದು. ಈ ದಿಸೆಯಲ್ಲಿ ಬೆಳೆಸಾಲ ಪಡೆದ ರೈತರು ಮತ್ತು ವ್ಯಾಪಾರ ಸಾಲಗಾರರು ಹಲವು ವರ್ಷಗಳಿಂದ ಕಟ್ ಬಾಕಿದಾರರಾಗಿದ್ದಾರೆ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದ್ದು ಸಂಘದ ಅಭಿವೃದ್ಧಿ ದೃಷ್ಟಿಯಿಂದ ಕಟ್ ಬಾಕಿದಾರರ ಮನವೊಲಿಸಿ ವಸೂಲಿ ಮಾಡುವ ಪ್ರಕ್ರೀಯೆ ನಡೆದಿದೆ. ಇದಕ್ಕೆ ಸಂಘದ ಸರ್ವ ಸದಸ್ಯರ ಸಹಕಾರ ಪ್ರಮುಖವಾಗಿದೆ ಎಂದರು.
ಈ ವೇಳೆ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, 80 ವರ್ಷ ಮೇಲ್ಪಟ್ಟ ಸದಸ್ಯರು, ಉತ್ತಮ ಠೇವಣಿದಾರರು, ಮರು ಪಾವತಿ ಸಾಲಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವ ಇತ್ತೀಚಿಗೆ ನಿಧನರಾದ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.ಮುಖ್ಯ ಕಾರ್ಯನಿರ್ವಾಹಕ ಷಣ್ಮುಖಪ್ಪ ಮದ್ನೂರ ವಾರ್ಷಿಕ ವ್ಯವಹಾರದ ಲೆಕ್ಕ ಸಭೆಗೆ ವಿವರಿಸಿದರು.
ಷಣ್ಮುಖಪ್ಪ ಮದ್ನೂರು ಸ್ವಾಗತಿಸಿದರು. ಪ್ರವೀಣ ಕಲಾಲ ವಂದಿಸಿದರು.