ಕನಕಪುರ: ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸುವ ಸಲುವಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಇದನ್ನು ಸಾಮಾನ್ಯ ಜನರು ಒಪ್ಪಿಕೊಂಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಆಶಿರ್ವಾದ ಹಾಗೂ ಕುಮಾರಣ್ಣರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸದೃಢವಾಗಿ ಕಟ್ಟಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿಗೆ ನಮ್ಮ ಪಕ್ಷದ ಭದ್ರಕೋಟೆಯಾಗಿದ್ದ ಕನಕಪುರದಿಂದಲೇ ಆರಂಭಿಸಿರುವುದಾಗಿ ಹೇಳಿದರು. ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರ ನಮ್ಮ ಕೈ ತಪ್ಪಲು ನಮ್ಮಿಂದ ಆದ ಕೆಲವು ತಪ್ಪಗಳೇ ಕಾರಣವಾಗಿದ್ದು, ಈಗಲೂ ಸಹ ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರ ಪಡೆಯೇ ಇರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿಯೂ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ನಿಶ್ಚಿತಿವಾಗಿದೆ ಎಂದರು.
ಶಾಸಕಾಂಗ ಸಭೆ ವಿರೋಧ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಜೆಡಿಎಸ್ ಕಾಂಗ್ರೆಸ್ಗೆ ಪ್ರಬಲ ವಿರೋಧ ಪಕ್ಷವಾಗಿದ್ದು, ಒಂದು ಸಂದರ್ಭದಲ್ಲಿ ಕೇವಲ ಐದು ಸಾವಿರ ಮತಗಳಿಂದ ಸೋಲನ್ನು ಅನುಭವಿಸಿದ್ದೇವೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದಲ್ಲಿ ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಆಡಳಿತ ಪಕ್ಷದ ನಾಯಕರೇ ಮುಖ್ಯಮಂತ್ರಿ ಮೇಲೆ ಆರೋಪ ಮಾಡಿ ಅದನ್ನು ತಂತ್ರ, ಕುತಂತ್ರ ಮಾಡಿ ವಿರೋಧ ಪಕ್ಷಗಳ ಮೇಲೆ ಹಾಕುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಕೆಲವು ನಾಯಕರು ಹಣ ಮಾಡಿ ಅಧಿಕಾರ ಪಡೆದು ವಿರೋಧ ಪಕ್ಷದವರು ಇಲ್ಲದ ರೀತಿ ಮಾಡಿ ಅವರ ವ್ಯವಹಾರಗಳನ್ನು ಮುಂದುವರೆಸುವ ನಾಯಕರೂ ಇದ್ದಾರೆ ಎಂದು ಹೇಳಿದರು.ಮಳವಳ್ಳಿ ಮಾಜಿ ಶಾಸಕ ಕೆ ಅನ್ನದಾನಿ ಮಾತನಾಡಿ, ತಾಲೂಕು ಉದ್ದಾರವಾಗಬೇಕಾದರೆ ಮೇಕೆದಾಟು ಯೋಜನೆ ಜಾರಿಯಾಗಬೇಕು. ಮೇಕೆದಾಟು ಪಾದಯಾತ್ರೆ ಮಾಡಿದ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆ ಹೆಸರು ಹೇಳಿಕೊಂಡು ಸರ್ಕಾರ ರಚಿಸಿದ ಕಾಂಗ್ರೆಸ್ನವರು ಈಗ ಯಾಕೆ ಮಾಡುತ್ತಿಲ್ಲ ಎಂದು ಡಿಕೆ ಶಿವಕುಮಾರ್ಗೆ ಪ್ರಶ್ನೆ ಮಾಡಿದರು.
ರಂಗನಾಥ್, ಬಿ. ನಾಗರಾಜು, ಜಯಮುತ್ತು, ಶಿವಲಿಂಗಪ್ಪ, ರಾಮಣ್ಣ, ದೇವರಾಜು, ಚಿನ್ನಸ್ವಾಮಿ,ವಕ್ತಾರೆ ಶ್ವೇತಾ ಯಾದವ್, ಶೋಭಾ,ಪುಟ್ಟರಾಜು, ನಲ್ಲಹಳ್ಳಿ ಶಿವಕುಮಾರ್ ಉಪಸ್ಥಿತರಿದ್ದರು.