ದೀಪಾವಳಿಗೆ ಸಕಲ ಸಿದ್ಧತೆ, ಖರೀದಿ ಜೋರು

KannadaprabhaNewsNetwork |  
Published : Oct 19, 2025, 01:00 AM IST
ದೀಪಾವಳಿಗೆ ಸಕಲ ಸಿದ್ಧತೆ, ಖರೀದಿ ಜೋರು | Kannada Prabha

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿಗೆ ತಾಲೂಕಿನ ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿ ಜೋರಾಗಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ಬೆಳಕಿನ ಹಬ್ಬ ದೀಪಾವಳಿಗೆ ತಾಲೂಕಿನ ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಎಂದು ವಾರದ ಮೊದಲೇ ಅಂಗಡಿಗಳು ಪಟ್ಟಣದಲ್ಲಿ ತೆರೆದಿದ್ದವು. ಇದರಿಂದ ಜನತೆ ಖುಷ್ ಆಗಿದ್ದು ಹಬ್ಬ ಆಚರಿಸುವ ಉತ್ಸಾಹ ಜೋರಿದೆ.

ಪಟ್ಟಣದ ಬಜಾರ್ ರಸ್ತೆ, ತೆಲಂಗ್ ಜೆರಾಕ್ಸ್ ಹತ್ತಿರ, ಶರಾವತಿ ಸರ್ಕಲ್, ಬಸ್ ನಿಲ್ದಾಣ ಹತ್ತಿರ, ಹೈವೇ ಸರ್ಕಲ್, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ವ್ಯಾಪಾರ ನಡೆದಿದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿಯು ವ್ಯಾಪಾರ ನಡೆದಿದೆ. ದೀಪಾವಳಿಗೆ ಬೇಕಾದ ಮೊಗೆ ಕಾಯಿ, ಮಣ್ಣಿನ ಹಣತೆ, ಆಕಾಶ ಬುಟ್ಟಿ ವ್ಯಾಪಾರ ಚೆನ್ನಾಗಿ ನಡೆದಿದೆ.

ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಆಲಂಕಾರಿಕ ದೀಪಗಳಿಗೆ ಬೇಡಿಕೆ ಹೆಚ್ಚಿದ್ದು ಕಂಡುವಂತು. ಕೇಂದ್ರ ಸರ್ಕಾರದ ಸ್ವದೇಶಿ ವಸ್ತುಗಳ‌ ಬಳಕೆ ಮಾಡುವ ಹೇಳಿಕೆಗಳು ಮಣ್ಣಿನ ಹಣತೆಯ ವ್ಯಾಪಾರವನ್ನು ಹೆಚ್ಚಿಸಿದಂತಿದೆ. ಮಾರುಕಟ್ಟೆಯ ಪ್ರದೇಶದಲ್ಲಿ ಆಲಂಕಾರಿಕ ದೀಪಗಳು ವ್ಯಾಪಾರ ಜೋರಾಗಿದೆ.

ಬಟ್ಟೆ ಅಂಗಡಿಗಳಲ್ಲಿ ವಹಿವಾಟು ಎಂದಿಗಿಂತ ಹೆಚ್ಚಿತ್ತು. ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದ ಬಟ್ಟೆ ಅಂಗಡಿಗಳಲ್ಲೂ ಜೋರಾದ ವ್ಯಾಪಾರ ನಡೆದಿದೆ. ದೀಪಾವಳಿ ಹಬ್ಬವಾಗಿದ್ದರಿಂದ ಹೊಸ ಬಟ್ಟೆಗಳ ಖರೀದಿಗೆ ಹೆಚ್ಚು ಗಮನ ಹರಿಸಿದ್ದರು. ಅದರಲ್ಲು ಮಹಿಳೆಯರು ಖರೀದಿಗೆ ವಿಶೇಷ ಆಸಕ್ತಿ ತೋರಿಸಿದ್ದಾರೆ. ಬೀದಿಬದಿಯ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂತು.ಸಿಹಿತಿಂಡಿ ವ್ಯಾಪಾರವೂ ಜೋರು:

ಅಂಗಡಿ ಪೂಜೆ, ವಾಹನ ಪೂಜೆ, ಪ್ಯಾಕ್ಟರಿಯಲ್ಲಿ ಲಕ್ಷ್ಮೀ ಪೂಜೆ ನಡೆಯಲಿದ್ದು, ಇದಕ್ಕೆ ಬೇಕಾದ ಸಿಹಿ ತಿಂಡಿಗೆ ಈಗಾಗಲೇ ಆರ್ಡರ್ ಕೊಡಲಾಗಿದ್ದು, ಅದರ ತಯಾರಕರು ಗ್ರಾಹಕರಿಗೆ ನೀಡಲು ಸಿಹಿ ತಿನಿಸು ತಯಾರಿಕೆಯ ಸಿದ್ಧತೆ ಮಾಡಿಕೊಂಡಿದ್ದಾರೆ.ಆಧುನಿಕ ಸ್ಪರ್ಶ ಪಡೆದ ಹಣತೆ:

ದೀಪಗಳ ಹಬ್ಬದ ವೇಳೆ ಮನೆಯನ್ನು ಪ್ರಜ್ವಲಿಸಲು ಮಣ್ಣಿನ ಹಣತೆಗಳಿಗೆ ಬಲು ಬೇಡಿಕೆ. ಹಣತೆ ಬೆಳಗಿಸುವ ಪದ್ಧತಿ ಮೊದಲಿನಿಂದಲು ರೂಡಿಯಲ್ಲಿದೆ. ಆದರೆ, ಇಂದು ಮಣ್ಣಿನ ಹಣತೆಗಳು ತೆರೆಮರೆಗೆ ಸರಿಯುತ್ತಿವೆ. ಆಧುನಿಕತೆಯ ನಾಗಾಲೋಟದಲ್ಲಿ ಪ್ಲಾಸ್ಟಿಕ್, ಪಿಂಗಾಣಿಯಿಂದ ತಯಾರಿಸಿದ ನಾನಾ ಬಗೆಯ ಬಣ್ಣಬಣ್ಣದ ದೀಪಗಳು ಮಾರುಕಟ್ಟೆಗೆ ಬಂದಿವೆ. ನಗರೀಕರಣ ಬದಲಾದ ಸಂಸ್ಕೃತಿಯಿಂದಾಗಿ ದೇಶಿಯ ವಸ್ತುಗಳು ತೆರೆಮರೆಗೆ ಸರಿಯುತ್ತಿವೆ. ಹತ್ತಿಯಿಂದ ಬತ್ತಿ ಹೊಸೆದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ಸುರಿದು ಮನೆ ಮುಂದೆ ಸಾಲಾಗಿ ಜೋಡಿಸಿ ದೀಪ ಉರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಇಂತಹ ಹಣತೆಗಳು ಈಗ ಆಧುನಿಕ ಸ್ಪರ್ಶ ಪಡೆದಿವೆ. ಹಲವು ರೂಪಗಳಾಗಿ ಬದಲಾಗಿವೆ. ಮಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ಹಣತೆಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವ ಪಿಂಗಾಣಿ ಹಣತೆ ರಾರಾಜಿಸುತ್ತಿವೆ. ಬಹುವಿನ್ಯಾಸ ಹೊಂದಿರುವ ಇಂತಹ ಹಣತೆಗಳು ಗ್ರಾಹಕರಿಗೂ ಅಚ್ಚುಮೆಚ್ಚು.

ಕೊಂಚ ಎಚ್ಚರ ತಪ್ಪಿದರೂ ಮಣ್ಣಿನ ದೀಪಗಳು ಒಡೆದು ಹೋಗುತ್ತವೆ. ಆದರೆ, ಪಿಂಗಾಣಿ ದೀಪಗಳು ಒಡೆದು ಹೋಗುವುದಿಲ್ಲ. ಹೀಗಾಗಿ, ಗ್ರಾಹಕರು ಪಿಂಗಾಣಿ ದೀಪಗಳತ್ತ ಮನಸೋಲುತ್ತಿದ್ದಾರೆ. ಎಣ್ಣೆ ಹಾಕಿ ದೀಪ ಉರಿಸುವ ಗೋಜು ಬೇಡ ಎಂದು ವಿದ್ಯುದ್ವೀಪ ಖರೀದಿಸುತ್ತಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ