ಕನ್ನಡಪ್ರಭ ವಾರ್ತೆ ಸೊರಬ
ದಸರಾ ಮಹೋತ್ಸವದ ಆಯೋಜನೆ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಇತ್ತೀಚೆಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ವೇದಿಕೆಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 2026-27ನೇ ಸಾಲಿನ ಅಧ್ಯಕ್ಷರಾಗಿ ಎಂ.ಬಿ. ರೇಣುಕಾಪ್ರಸಾದ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಧಾಕರ್ ಪಿ. ನಾಯ್ಕ್, ಕಾರ್ಯದರ್ಶಿಯಾಗಿ ಪ್ರಜ್ವಲ್ ಚಂದ್ರಗುತ್ತಿ, ಖಜಾಂಚಿಯಾಗಿ ಎನ್.ಜಿ. ನಾಗರಾಜ್ ಹಾಗೂ ಸಹ-ಕಾರ್ಯದರ್ಶಿಯಾಗಿ ಪ್ರಕಾಶ್ ಮಿರ್ಜಿ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಮಾತನಾಡಿ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪೂರ್ಣ ಸಹಯೋಗದೊಂದಿಗೆ ಈ ಬಾರಿಯ ದಸರಾ ಉತ್ಸವ ಶ್ರೇಷ್ಠ ಮಟ್ಟದಲ್ಲಿ ಆಚರಿಸಲಾಗುವುದು. ವಿಶೇಷವಾಗಿ 9 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ರೋಮಾಂಚನಕಾರಿ ಜಂಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲು ತೀರ್ಮಾನಿಸಲಾಗಿದೆ. ಎರಡು ದಿನಗಳಲ್ಲಿ ಚಂದ್ರಗುತ್ತಿ ಸಹಿತ ಅಕ್ಕಪಕ್ಕದ ಗ್ರಾಮಗಳ ಪ್ರಮುಖರ ಜಂಟಿ ಸಭೆ ಕರೆದು ಉತ್ಸವದ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.ಸಚಿವ ಮಧು ಬಂಗಾರಪ್ಪ ಚಾಲನೆ: ಸಚಿವ ಮಧು ಬಂಗಾರಪ್ಪ ದಸರಾ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉತ್ಸವಕ್ಕೆ ನಿರಂತರ ಪ್ರೋತ್ಸಾಹ ಹಾಗೂ ಹೆಚ್ಚಿನ ಸಹಕಾರ ನೀಡಲಿದ್ದಾರೆ. ಈ ಉತ್ಸವವನ್ನು ಜಾತಿ, ಮತ ಹಾಗೂ ಪಕ್ಷದ ಭೇದಭಾವವಿಲ್ಲದೆ ಸರ್ವರನ್ನೂ ಒಗೂಡಿಸಿ ಅತ್ಯಂತ ಸೌಹಾರ್ದಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಹಾಗೂ ಧರ್ಮಾಭಿಮಾನಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು.