ಬೇಸಿಗೆ ಶಿಬಿರಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ: ಹೇಮಂತ

KannadaprabhaNewsNetwork | Published : Apr 5, 2024 1:01 AM

ಬೇಸಿಗೆ ಶಿಬಿರದಿಂದ ಮಕ್ಕಳು ವಿವಿಧ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸೂರ್ಯ ಫೌಂಡೇಶನ್ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಎಬಿವಿಪಿ ಬೀದರ್‌ ಸಂಘಟನಾ ಕಾರ್ಯದರ್ಶಿ ಹೇಮಂತ ಹೇಳಿದರು. ಭಾಲ್ಕಿ ತಾಲೂಕಿನ ಬಸವನಗರದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್

ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಮಕ್ಕಳು ಇತರೆ ಮಕ್ಕಳೊಂದಿಗೆ ಹೊಸದಾಗಿ ಸ್ನೇಹ ಸಂಪಾದಿಸುವುದು ಹಾಗೂ ವಿವಿಧ ರೀತಿಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಲು ಹಾಗೂ ಸಂಸ್ಕಾರವಂತರಾಗಲು ಸಾಧ್ಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ್‌ ಸಂಘಟನಾ ಕಾರ್ಯದರ್ಶಿ ಹೇಮಂತ ತಿಳಿಸಿದರು.

ಭಾಲ್ಕಿ ತಾಲೂಕಿನ ಬಸವನಗರದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ 6 ರಿಂದ 14 ವರ್ಷದ ಮಕ್ಕಳಿಗಾಗಿ ಆಯೋಜಿಸಿರುವ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳು ರಜೆಯ ದಿನಗಳನ್ನು ಸ್ನೇಹಿತರೊಂದಿಗೆ ಕಳೆಯದೆ ಮೊಬೈಲ್‌ನಲ್ಲಿ ಆಟವಾಡುವುದರ ಮೂಲಕ ಕಾಲ ಕಳೆಯುತ್ತಿದ್ದು, ಇದರಿಂದ ಮಕ್ಕಳಿಗೆ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬೇಸಿಗೆ ಶಿಬಿರದಿಂದ ಮಕ್ಕಳು ವಿವಿಧ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸೂರ್ಯ ಫೌಂಡೇಶನ್ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸೂರ್ಯ ಫೌಂಡೇಶನ್ ಸಂಯೋಜಕರಾದ ಗುರುನಾಥ ರಾಜಗೀರಾ ಮಾತನಾಡಿ, ಫೌಂಡೇಶನ್ ಸಂಸ್ಥಾಪಕ ಜಯಪ್ರಕಾಶ ಅಗ್ರವಾಲ್ ಮಾರ್ಗದರ್ಶನದಲ್ಲಿ ಮತ್ತು ಬೀದರ್‌ ಜಿಲ್ಲೆಯವರೆ ಆದ ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ನೇತೃತ್ವದಲ್ಲಿ ನಿರಂತರವಾಗಿ ಜಿಲ್ಲೆಯಲ್ಲಿ ಅನೇಕ ತರಹದ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬರಲಾಗುತ್ತಿದೆ. ಅದರಲ್ಲಿ ಈ ಬೇಸಿಗೆ ಶಿಬಿರವು ಪ್ರಮುಖವಾಗಿದೆ.

ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಮಕ್ಕಳ ಪ್ರತಿಭೆ ಹೊರತರಲು ಹಾಗೂ ಹೊರತಂದ ಪ್ರತಿಭೆಯನ್ನು ಬೆಳೆಸಲು ಬೇಸಿಗೆ ಶಿಬಿರ ಬಹಳ ಉತ್ತಮ ವೇದಿಕೆಯಾಗಿದೆ. ಈ ಪ್ರಯುಕ್ತ ಪೋಷಕರು ತಮ್ಮ ಮಕ್ಕಳ ಹಿತದೃಷ್ಟಿಯಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ, ರಮೇಶ ಅರಾಳೆ, ಸಂಗಮೇಶ ದಾನಿ ಸೇರಿದಂತೆ ಇತರರಿದ್ದರು.