ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಪೂರಕ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಏಕವಲಯ ಅಂತರ್ ಹ್ಯಾಂಡ್‌ಬಾಲ್ ಪಂದ್ಯಾವಳಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಅನಾದಿ ಕಾಲದಿಂದಲೂ ಕ್ರೀಡೆ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಬಹಳಷ್ಟು ಪೂರಕವಾಗಿದೆ. ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲವು ಲೆಕ್ಕ ಹಾಕಬಾರದು. ಕ್ರೀಡಾಪಟುಗಳು ಸೋಲಿಗೆ ಹೆದರದೆ ಇದ್ದಾಗ ಮಾತ್ರ ಗೆಲವು ಸುಲಭ ಸಾಧ್ಯ ಎಂದು ರಾಜ್ಯ ದೈಹಿಕ ನಿರ್ದೇಶಕರ ಸಂಘದ ರಾಜ್ಯಾಧ್ಯಕ್ಷ ಪ್ರೊ.ರವಿ ಗೋಲಾ ಹೇಳಿದರು.ಇಲ್ಲಿನ ಪ್ರತಿಷ್ಠಿತ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಆಶ್ರಯದಲ್ಲಿ ಭಾನುವಾರ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಏಕವಲಯ ಅಂತರ್ ಹ್ಯಾಂಡ್‌ಬಾಲ್ ಪಂದ್ಯಾವಳಿ ಉದ್ಘಾಟನೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ತಮ್ಮ ವೈದ್ಯಕೀಯ ಸೇವೆಯ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಪ್ರಾಧಾನ್ಯತೆ ನೀಡುವ ಮೂಲಕ ತೇರದಾಳ ಮತ್ತು ಸುತ್ತಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ನೀಡಲು ಪ್ರಾರಂಭಿಸಿರುವ ಡಾ.ಮಹಾವೀರ ದಾನಿಗೊಂಡರ ಕಾರ್ಯ ಶ್ಲಾಘನೀಯವೆಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಚೇರಮನ್ ಡಾ. ಮಹಾವೀರ ದಾನಿಗೊಂಡ, ಕ್ರೀಡಾಪಟುಗಳನ್ನು ಬೆಳೆಸುವ ಕೆಲಸ ನಿರಂತರವಾಗಿ ಸಾಗಬೇಕು. ಕ್ರೀಡಾಳುಗಳಿಗೆ ಸರ್ಕಾರಗಳು ನೆರವಿನ ಹಸ್ತ ಚಾಚುವ ಮೂಲಕ ಉದ್ಯೋಗಾವಕಾಶಗಳಲ್ಲಿ ಆದ್ಯತೆಯ ಅವಕಾಶ ಕಲ್ಪಿಸಬೇಕು ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಅದು ಸಾಧ್ಯ ಆಗುತ್ತಿಲ್ಲ. ಆದರೂ ದೇಶದ ಕ್ರೀಡಾಪಟುಗಳು ಅಂತರಾಷ್ಟçಮಟ್ಟದ ಬೇರೆ ಬೇರೆ ಕ್ರೀಡೆಗಳಲ್ಲಿ ಪದಕಗಳನ್ನು ತರುವುದು ನಿಲ್ಲಿಸಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಣಿ ಚೆನ್ನಮ್ಮ ವಿವಿ ದೈಹಿಕ ನಿರ್ದೇಶಕ ಡಾ. ಜಗದೀಶ ಗಸ್ತಿ ಮಾತನಾಡಿದರು. ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಕೃಷ್ಣಾಪುರೆ, ದೈಹಿಕ ನಿರ್ದೇಶಕ ರಾಮು ಹಾಡಕರ ಮತ್ತಿತರಿದ್ದರು. ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ಪುರುಷ ಹಾಗೂ ಮಹಿಳೆಯರ ೨೮ ತಂಡಗಳು ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

Share this article