ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೊರವರ್ತುಲ ರಸ್ತೆ ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿ ಸಂದಿಸುವ ವೃತ್ತಕ್ಕೆ ಕೆಂಪೇಗೌಡರ ವೃತ್ತ ಎಂದು ನಾಮಕರಣ ಮಾಡಿದ್ದರೂ ಕೊಂಬಿಯಾ ಏಷಿಯಾ, ಮಣಿಪಾಲ್ ವೃತ್ತ ಎಂದು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿರುವುದು ಸರಿಯಲ್ಲ. ಬದಲಿಗೆ ನಾಡಪ್ರಭುಗಳ ಗೌರವಾರ್ಥ ಅವರ ಹೆಸರನ್ನುಳ ನಾಮಫಲಕ ಅಳವಡಿಸಿ ಆ ಹೆಸರಿನಿಂದಲೇ ಕರೆಯಬೇಕು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್ ಒತ್ತಾಯಿಸಿದ್ದಾರೆ.ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ನಗರ ಪಾಲಿಕೆ ಮಾಜಿ ಸದಸ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್ ಹಾಗೂ ಸ್ನೇಹಿತರು ನಗರದ ಹೆಬ್ಬಾಳು ಸೂರ್ಯ ಬೇಕರಿಯಿಂದ ಬಸವನಗುಡಿ ವೃತ್ತದ ಮೂಲಕ ಕೆಂಪೇಗೌಡರ ವೃತ್ತದವರೆಗೆ ಬೈಕ್ ರ್ಯಾಲಿ ಮೂಲಕ ಸಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವೃತ್ತಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದು ಅದೇ ಹೆಸರಿನಲ್ಲಿ ಕೆರೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಬಳಿಕ ಮಾತನಾಡಿದ ಅವರು, ಕೆಂಪೇಗೌರಂತಹ ಪ್ರಾತಃಸ್ಮರಣೀಯರ ನೆನಪಿನಲ್ಲಿ ಮೈಸೂರು ನಗರದಲ್ಲಿ ಕೆಲ ವೃತ್ತಗಳಿಗೆ ಅವರ ಹೆಸರು ನಾಮಕರಣ ಮಾಡಲಾಗಿದೆ. ಅದರಂತೆ ಮೈಸೂರು-ಬೆಂಗಳೂರು ಹೆದ್ದಾರಿಯ ಹೊರ ವರ್ತುಲ ರಸ್ತೆಯ ಜಂಕ್ಷನ್ ಗೂ ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಆದರೆ, ಇದರ ಅರಿವಿರದವರು ಇನ್ನೂ ಆ ವೃತ್ತವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ವೃತ್ತಕ್ಕೆ ಹೆಸರಿಟ್ಟಿರುವ ಬಗ್ಗೆ ಅರಿವಿಲ್ಲ. ಆದ್ದರಿಂದ ಸರ್ಕಾರ ಕೇವಲ ಹೆಸರು ನಾಮಕರಣ ಮಾಡಿ ಸುಮ್ಮನಾಗುವ ಬದಲು ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ದೊಡ್ಡ ಅಕ್ಷರಗಳ ನಾಮಫಲಕ ಹಾಕುವ ಮೂಲಕ ನಾಡಪ್ರಭುವಿಗೆ ನೈಜ ಗೌರವ ಸಲ್ಲಿಸಬೇಕಿದೆ ಎಂದರು.ಬೆಂಗಳೂರು ನಗರವನ್ನು ಕಟ್ಟಿದ ನಾಡಪ್ರಭುಗಳ ದೂರದೃಷ್ಟಿಗೆ ಸರಿಸಾಟಿ ಇಲ್ಲ. ಜಾಗತೀಕರಣದ ಈ ದಿನಗಳಲ್ಲಿ ಬೆಂಗಳೂರಿಗೆ ಸಾಟಿಯಾದ ನಗರ ಬೇರಿಲ್ಲ. ಬೆಂಗಳೂರು ಇಂದು ಸಿಲಿಕಾನ್ ಸಿಟಿ ಆಗಿದೆ ಎಂದರೆ ಅದು ಕೆಂಪೇಗೌಡರ ದೂರದೃಷ್ಟಿಯಿಂದ ಎಂಬುದನ್ನು ಯಾರೂ ಮರೆಯಬಾರದು. ಅವರ ಸಾಧನೆ, ದೂರದೃಷ್ಟಿಯನ್ನು ಸ್ಮರಿಸಿ ಸರ್ಕಾರ ಕೆಂಪೇಗೌಡರ ಜಯಂತಿಯನ್ನು 2017 ರಿಂದ ರಾಜ್ಯಾದ್ಯಂತ ಆಚರಿಸುವುದಾಗಿ ಘೋಷಿಸಿತು ಎಂದು ಸ್ಮರಿಸಿದರು. ಉಸ್ತುವಾರಿ ಸಚಿವರ ಗೈರು ಸರಿಯಲ್ಲಸರ್ಕಾರದಿಂದ ಆಯೋಜಿಸುವ ಮಹನೀಯರ ಜಯಂತಿಗಳಲ್ಲಿ ಹಾಜರಿದ್ದು ಸರ್ಕಾರದ ಪರವಾಗಿ ಗೌರವ ಸಲ್ಲಿಸಬೇಕಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಕರ್ತವ್ಯ. ಆದರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಗೈರಾಗಿರುವುದು ಬೇಸರದ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸರdಕಾರದ ವತಿಯಿಂದ ಜಿಲ್ಲಾಮಟ್ಟದಲ್ಲೂ ಕೆಂಪೇಗೌಡರ ಜಯಂತಿ ಆಚರಿಸುವುದಾಗಿ ಘೋಷಿಸಿದರು.ಆದರೆ, ಅವರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೇ ಜಯಂತಿ ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವುದು ಶೋಭೆ ತರುವಂತದ್ದಲ್ಲ. ಯಾವುದೇ ಮಹನೀಯರು ಯಾವುದೇ ಜಾತಿ, ಧರ್ಮಗಳಿಗೆ ಸೀಮಿತವಲ್ಲ. ಈ ಮಾತನ್ನು ಅವರುಗಳೇ ಸಾಕಷ್ಟು ಬಾರಿ ಹೇಳಿದ್ದಾರೆ. ಇಷ್ಟಾದರೂ ನಾಡಪ್ರಭು ಕೆಂಪೇಗೌಡರ ಜಯಂತಿಯಿಂದ ದೂರ ಉಳಿಯುವುದು ಎಷ್ಟು ಸರಿ? ದೂರ ಉಳಿಯುವಂತಹ ತುರ್ತು ಕೆಲಸವಾದರೂ ಏನಿತ್ತು ಎಂಬುದನ್ನು ಅವರೇ ತಿಳಿಸಬೇಕು. ಜಯಂತಿ ಘೋಷಿಸಿದಾಗಲೂ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈಗಲೂ ಅವರೇ ಉಸ್ತುವಾರಿಗಳಾಗಿದ್ದಾರೆ. ಆದರೂ ಕಳೆದ ಮೂರು ವರ್ಷಗಳಿಂದ ಕಲಾ ಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಿಂದ ದೂರು ಉಳಿಯುತ್ತಿರುವುದೇಕೆ? ಸಚಿವರ ಈ ವರ್ತನೆ ಸರಿಯಲ್ಲ. ಸಚಿವರ ಮುನಿಸು ಕೆಂಪೇಗೌಡರ ಮೇಲೋ, ಇಲ್ಲ ಒಕ್ಕಲಿಗ ಸಮುದಾಯದ ಮೇಲೋ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.