ಧಾರವಾಡ: ಕನ್ನಡದ ಮೂಲ ಕೃಷಿಕ ಆಲೂರು ವೆಂಕಟರಾವರ ಹೆಸರಿನ ಮಾತ್ರದಿಂದಲೇ ನಾವು ಪುಳಕಿತಗೊಂಡಿದ್ದೇವು ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ನಿವೃತ್ತ ಪ್ರಾಚಾರ್ಯ ಮನೀಶ ದೇಸಾಯಿ ಹೇಳಿದರು.
ಆಲೂರು ವೆಂಕಟರಾವರ 61ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ನಾವು ಅವರನ್ನು ನೋಡದೇ ಇದ್ದರೂ ಅವರ ಕನ್ನಡದ ಕಾರ್ಯಗಳಿಂದ ಪ್ರೇರಿತರಾಗಿ ಸಾಧನೆಕೇರಿಯಲ್ಲಿ ಸರಕ್ಯೂಲೇಟಿಂಗ್ ಲೈಬ್ರರಿ ಪ್ರಾರಂಭಿಸಿ ಅಲ್ಲಿ ಕರ್ನಾಟಕ ಗತವೈಭವ, ಲೋಕಮಾನ್ಯ ತಿಲಕರ ಕನ್ನಡ ಗೀತಾ ರಹಸ್ಯ ಕನ್ನಡ ಅನುವಾದ ಹಾಗೂ ಇನ್ನಿತರ ಮಹತ್ವದ ಕನ್ನಡ ಕೃತಿಗಳನ್ನು ಸಂಗ್ರಹಿಸಿ ಓದುಗರಿಗೆ ವಿತರಿಸಿದ್ದು ನೆನಪಿದೆ ಎಂದು ಆಲೂರರ ಕನ್ನಡ ಕಟ್ಟುವ ಕಾರ್ಯಗಳನ್ನು ಸ್ಮರಿಸಿಕೊಂಡರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ, ಒಂದು ಕಾಲಕ್ಕೆ ವೈಭವಯುತ ಸಾಮ್ರಾಜ್ಯವೆಂದೇ ಗುರುತಿಸಿಕೊಂಡಿದ್ದ ವಿಜಯನಗರದ ಹಂಪಿಯ ಭಗ್ನಾವಶೇಷಗಳು, ಪಳೆಯುಳಿಕೆಗಳು ತಮ್ಮ ಹೃದಯವನ್ನು ಕಲಕಿ ಬಿಟ್ಟಾಗ ತೀವ್ರ ಹತಾಶೆ ಅನುಭವಿಸಿದ ಆಲೂರರು ಆ ದಿನವನ್ನು ತಮ್ಮ ಜೀವನದಲ್ಲಿ ಕ್ರಾಂತಿ ಮಾಡಿದ ದಿನವೆಂದೇ ಭಾವಿಸುತ್ತಾರೆ. ಆ ಕ್ಷಣದಿಂದ ವಿಜಯನಗರದ ಪುನರುತ್ಥಾನ, ಕನ್ನಡ ಕರ್ನಾಟಕತ್ವ, ಕರ್ನಾಟಕ ಏಕೀಕರಣಗಳ ಹೊಸ ಹೊಳವುಗಳನ್ನು ಕಂಡು ಅವುಗಳ ಸಾಕ್ಷಾತ್ಕಾರವಾಗಿ ಪಣತೊಡುತ್ತಾರೆ. ವಂಗಭಂಗ ಚಳುವಳಿಯ ಕಾವು ಇವರನ್ನು ತಟ್ಟಿ ಮತ್ತಷ್ಟು ದು:ಖವಾಗಿ ನಿಸ್ವಾರ್ಥ ಭಾವನೆಯಿಂದ ಈ ನಾಡು ನನ್ನ ಮನೆ, ಈ ದೇಶ ನನ್ನ ಕುಟುಂಬವೆಂಬ ಸೂತ್ರವನ್ನು ಮೂಲವಾಗಿಸಿಕೊಂಡು ತಮ್ಮ ಹೊರಾಟಕ್ಕೆ ಶ್ರೀಕಾರ ಹಾಕುತ್ತಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ಡಾ. ಪ್ರಮೋದಗಾಯಿ ಅಧ್ಯಕ್ಷತೆ ವಹಿಸಿದ್ದರು. ಗೀತಾ ಆಲೂರ ಪ್ರಾರ್ಥಿಸಿದರು. ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಾ. ದೀಪಕ ಆಲೂರ ನಿರೂಪಿಸಿದರು. ಶ್ರೀನಿವಾಸ ವಾಡಪ್ಪಿ ವಂದಿಸಿದರು. ಡಾ. ಎಚ್.ವಿ. ಖಂಡಕಿ, ಕವಿ ನರಸಿಂಹ ಪರಾಂಜಪೆ, ಎಸ್.ಎಂ. ದೇಶಪಾಂಡೆ ಇದ್ದರು.