ಹೊನ್ನಾವರ: ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪಪಂ ಹೊನ್ನಾವರ, ಮಂಕಿ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ನಿಯಮಗಳು 2016 ರ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಪಟ್ಟಣದ ಸಭಾಭವನದಲ್ಲಿ ನಡೆಯಿತು.
ನಿವೃತ್ತ ಉಪನ್ಯಾಸಕ ಜಿ.ಪಿ ಪಾಠಣಕರ ಮಾತನಾಡಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳಿಗೆ ದೌರ್ಜನ್ಯ ಆಗುತ್ತಿತ್ತು. ಇದನ್ನು ಮನಗಂಡು ಡಾ.ಅಂಬೇಡ್ಕರ್ ಸಂವಿಧಾನ ತಂದು ಸಮಾನತೆಯನ್ನು ತರುವಲ್ಲಿ ಹೋರಾಟ ನಡೆಸಿದರು. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕೆಲವರಿಂದ ದುರುಪಯೋಗವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಹಾಯಕ ಸರ್ಕಾರಿ ಅಭಿಯೋಜಕ ಸಂಪದಾ ಗುನಗಾ ಮಾತನಾಡಿ, ಕಾಯಿದೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಇದಕ್ಕೆ ಪೂರಕವಾದ ದಾಖಲೆಗಳಿಲ್ಲದೇ ಇದ್ದರೆ ಸಮಯ, ಹಣವೆಲ್ಲ ವ್ಯರ್ಥವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಎಸು ಬೆಂಗಳೂರು ಮಾತನಾಡಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾನೂನುಗಳ ಅರಿವು ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮೂಡುತ್ತದೆ ಎಂದರು.ವೇದಿಕೆಯಲ್ಲಿ ಇಒ ಚೇತನಕುಮಾರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಶೇಖರ, ತುಳಸೀದಾಸ ಪಾವಸ್ಕರ, ಪ್ರಭು ಹಳ್ಳೇರ, ಜಿ.ಟಿ. ಹಳ್ಳೇರ, ವಿನಾಯಕ ಅವಧಾನಿ, ರಾಧಾಕೃಷ್ಣ ಇದ್ದರು.
ಸಮಾಜ ಕಲ್ಯಾಣ ಇಲಾಖೆಯ ಸುಮಂಗಲಾ ಭಟ್ಟ ಸ್ವಾಗತಿಸಿದರು . ಸುದೀಶ ನಾಯ್ಕ ನಿರೂಪಿಸಿದರು.ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.