ಹರಪನಹಳ್ಳಿ: ಜಯಂತಿ ದಿನ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳದೆ, ಅವರ ಆದರ್ಶ, ಸಿದ್ಧಾಂತಗಳಲ್ಲಿ ಕೆಲವನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಪ್ರತ್ಯೇಕವಾಗಿ ಜಯಂತಿ ಆಚರಣೆ ಮಾಡುವುದಕ್ಕಿಂತ ಎಲ್ಲ ಸಂಘ-ಸಂಸ್ಥೆಗಳು ಕುಳಿತು ಚರ್ಚಿಸಿ, ತಾಲೂಕು ಕೇಂದ್ರದಲ್ಲಿ ಎಲ್ಲರೂ ಸೇರಿ ಇನ್ನೂ ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಬಹುದಲ್ಲ. ಆ ರೀತಿ ಆಚರಿಸಿ ರಾಜ್ಯಕ್ಕೆ ಮಾದರಿಯಾಗಬಹುದು. ಇದು ನನ್ನ ಸಲಹೆ ಅಷ್ಟೆ ಎಂದು ಹೇಳಿದರು.
ಕಂದಾಯ ಉಪವಿಭಾಗಾಧಿಕಾರಿ ಟಿ. ಸುರೇಶಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಬು ಜಗಜೀವನ ರಾಂ ಅವರು ಹಸಿರು ಕ್ರಾಂತಿ ಮಾಡಿ, ಅಸ್ಪೃಶ್ಯತೆ ಹೋಗಲಾಡಿಸಿ, ಸಮಾನತೆ ತರಲು ಹೋರಾಟ ನಡೆಸಿದರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಬಹುಮುಖ ಪ್ರತಿಭೆಯಾಗಿದ್ದು, ಅವರು ಈ ನೆಲದಲ್ಲಿ ಜನಿಸಿದ್ದು ನಮ್ಮ ಪುಣ್ಯ. ನನ್ನ ಹೋರಾಟ ಮುಂದುವರಿಸಿ, ಹಿಂದಕ್ಕೆ ಮಾತ್ರ ಕೊಂಡೊಯ್ಯಬೇಡಿ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಅವರ ಆಶಯದಂತೆ ನಡೆದುಕೊಂಡು ಜಾತ್ಯತೀತ, ಸಮಾನತೆಯ ರಾಷ್ಟ್ರ ಕಟ್ಟೋಣ ಎಂದು ಹೇಳಿದರು.ಕೊಟ್ಟೂರಿನ ಪ್ರಾಧ್ಯಾಪಕ ಡಾ. ಸತೀಶ ಪಾಟೀಲ್ ಹಾಗೂ ನಂದಿಬೇವೂರು ಶಿಕ್ಷಕ ಬಿ. ವಸಂತ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕುಬೇರಗೌಡ, ಡಿವೈಎಸ್ಪಿ ಸಂತೋಷ ಚವ್ಹಾಣ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ, ಬಿಇಒ ಎಚ್. ಲೇಪಾಕ್ಷಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ, ಲಾಟಿದಾದಾಪೀರ, ಅಬ್ದುಲ್ ರಹಿಮಾನ್, ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಗುಂಡಗತ್ತಿ ಕೊಟ್ರಪ್ಪ, ಮೈಲಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ, ಸುಭಾಷ್, ಯಾಸ್ಮೀನ್, ಎನ್.ಜಿ. ಬಸವರಾಜ ಇದ್ದರು.