ಕೊಪ್ಪಳ: ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯ ಆತ್ಮದ ಅಸ್ಮಿತೆಯಾಗಿದ್ದು, ಅವರು ಸೃಷ್ಟಿಸಿದ ಸಂವಿಧಾನ ದುರುಪಯೋಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜೆಡಿಎಸ್ ರಾಜ್ಯ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.
ದುರ್ಬಲರ, ಅಸಹಾಯಕರ ಹಾಗೂ ತುಳಿತಕ್ಕೊಳಗಾದವರ ಬದುಕಿಗೆ ಬೆಳಕಾಗಿ ಸಹ ಬಾಳ್ವೆಯ ಭಾರತೀಯ ತತ್ವ ಎತ್ತಿ ಹಿಡಿದವರು ಅಂಬೇಡ್ಕರ್ ಅವರು ಬುದ್ದನ ಪ್ರೇರಣೆ,ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿದ್ದರು. ಅವರು ಭಾರತಕ್ಕೆ ಸಮಾನತೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟವರು. ಅಂಬೇಡ್ಕರ್ ಸಂವಿಧಾನದ ಸಮಿತಿಯಲ್ಲಿ ಇಲ್ಲದಿದ್ದರೆ ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಸಂವಿಧಾನ ಆಗುತ್ತಿರಲಿಲ್ಲ ಎಲ್ಲರ ಒಪ್ಪಿಗೆ ಸಿಗುತ್ತಿರಲಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಜಗತ್ತಿನ ಮಹಾಚಿಂತಕ ಪ್ಲೇಟೊ ಹಾಗೂ ಕಾರ್ಲ್ ಮಾರ್ಕ್ಸ್ ಸ್ಥಾನದಲ್ಲಿ ನಿಲ್ಲುತ್ತಾರೆ.ಪ್ಲೇಟೊ ಅತ್ಯಂತ ಶ್ರೇಷ್ಠ ಚಿಂತಕ. ಕಾರ್ಲ್ ಮಾರ್ಕ್ ಮಾನವನ ಗೌರವ, ಹಕ್ಕು,ಶ್ರಮ ಎಲ್ಲ ವಿಚಾರಗಳಲ್ಲಿ ಅದ್ಭುತ ಕಲ್ಪನೆ ಕೊಟ್ಟಿದ್ದಾನೆ. ಹೀಗಾಗಿ ಅವರ ಜನ್ಮ ದಿನಾಚರಣೆಯ ದಿನ ಅವರ ತತ್ವ ಅನುಸರಿಸುವ ಶಪಥ ಮಾಡಬೇಕು ಎಂದರು.ಕೆಲವರು ಸಂವಿಧಾನ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಾರೆ.ಆದರೆ ಅದನ್ನು ಓದಿರುವುದಿಲ್ಲ. ಈ ದೇಶದಲ್ಲಿ ಸಂವಿಧಾನ ಸ್ವಾರ್ಥಕ್ಕೆ ಬಳಕೆ ಮಾಡಿರುವುದು ಕಾಂಗ್ರೆಸ್. ಅಂಬೇಡ್ಕರ್ ಸೋಲಿಸಿದ್ದು, ಅವರು ತೀರಿಕೊಂಡಾಗ ಅವರಿಗೆ ಜಾಗ ನೀಡದೇ ಇದ್ದದ್ದು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ವೋಟ್ ಬ್ಯಾಂಕ್ ಆಗಿ ಪರಿಗಣಿಸಿದೆ. ಆದ್ದರಿಂದ ಆ ಪಕ್ಷದ ನಡೆಯ ಬಗ್ಗೆ ಹುಷಾರಾಗಿರಬೇಕು ಎಂದರು.