ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಉದ್ಘಾಟಿಸಿ ಎಂ.ಮನಿರಾಜು ಅರಿಕೆರೆ
ಅವಕಾಶ ವಂಚಿತ ಭಾರತೀಯರಿಗೆ ಘನತೆಯ ಬದುಕನ್ನು ಕಲ್ಪಿಸುವ ಏಕೈಕ ಉದ್ದೇಶದಿಂದ ತಮ್ಮಿಡೀ ಬದುಕನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮಾತ್ರ ಎಂದು ಚಿಂತಕ ಹಾಗೂ ಉಪನ್ಯಾಸಕ ಎಂ.ಮನಿರಾಜು ಅರಿಕೆರೆ ತಿಳಿಸಿದರು.
ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಗೆ ದೀಪಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ, ಅಪ್ರತಿಮ ಜ್ಞಾನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಬದುಕನ್ನು ದಮನಿತ ಸಮುದಾಯಗಳ ಸಬಲೀಕರಣಕ್ಕಾಗಿ ಮೀಸಲಿಟ್ಟರು. ಎಲ್ಲರನ್ನೂ ಒಳಗೊಂಡ ಸದೃಢ ಭಾರತ ನಿರ್ಮಾಣಕ್ಕಾಗಿ ಅಂತಃಕರಣದಿಂದ ಮಿಡಿದರು. ಅವರ ಜೀವನ ವ್ಯಕ್ತಿತ್ವ ಹೋರಾಟ ಮತ್ತು ಕೊಡುಗೆಗಳ ಅರಿವಿನ ಅಗತ್ಯತೆ ಮತ್ತು ಅನಿವಾರ್ಯತೆ ಇಂದು ಹೆಚ್ಚಿದೆ. ಸಂವಿಧಾನದ ಶಕ್ತಿ ಮತ್ತು ಸೌಂದರ್ಯ ಅದರ ಅರಿವಿನಲ್ಲಿಯೇ ಇದೆ ಎಂದರು.ನಮ್ಮದು ಶ್ರೇಷ್ಠ ಸಂವಿಧಾನ ಎನ್ನುತ್ತೇವೆ. 1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸಿಕೊಂಡ ನಾವು ಈ 76 ವರ್ಷದಲ್ಲಿ 105 ಬಾರಿ ತಿದ್ದುಪಡಿ ಮಾಡಿಕೊಂಡಿದ್ದೇವೆ. ಅಮೆರಿಕದ ಸಂವಿಧಾನಕ್ಕೆ ಹೋಲಿಸಿದರೆ ಭಾರತದ ಸಂವಿಧಾನಕ್ಕೆ ಆದಷ್ಟು ತಿದ್ದುಪಡಿ ಬೇರೆ ಯಾವುದಕ್ಕೂ ಆಗಿಲ್ಲದಿರುವುದು ದುರ್ದೈವ ಎಂದರು.ವಕೀಲ ಶ್ರೀರಾಮಪುರ ನರಸಿಂಹಮೂರ್ತಿ ಮಾತನಾಡಿ, ದೇಶ ಮತ್ತು ದೇಶವಾಸಿಗಳ ಭವಿಷ್ಯಕ್ಕಾಗಿ ಸಂವಿಧಾನದ ಮೂಲಕ ಹೊಸ ಭಾಷ್ಯ ಬರೆದ ಧೀಮಂತ ನಾಯಕ ಅಂಬೇಡ್ಕರಾಗಿದ್ದಾರೆ. ಅವರ ಆದರ್ಶದ ಬದುಕು ನಮ್ಮದಾಗಲಿ. ದೇಶಕ್ಕೆ ಹೊರೆಯಾಗದ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನಕ್ಕೆ ಬದ್ಧವಾಗಿ ಬಳಸೋಣ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಶೋಷಣೆ ಮುಕ್ತ ಸಮಾಜ ಕಟ್ಟೋಣ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ಭಾಷಣ ಸಭಿಕರನ್ನು ತನ್ಮಯಗೊಳಿಸಿತು. ಈ ವೇಳೆ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿ ಸಮೂಹ ಹಾಜರಿದ್ದು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.