ಸಾಮಾಜಿಕ ಸಮಾನತೆಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ ಅಂಬೇಡ್ಕರ್

KannadaprabhaNewsNetwork |  
Published : Feb 22, 2026, 02:15 AM IST
ಬಳ್ಳಾರಿ ತಾಲೂಕಿನ  ಮೊರಾರ್ಜಿ ದೇಸಾಯಿ ವಸತಿ ಮೋಕ ಶಾಲೆಯಲ್ಲಿ (ಬಿ.ಡಿ.ಹಳ್ಳಿ) ಶ್ರೀ ಮಹದೇವ ತಾತ ಕಲಾ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಕುರಿತು ನಾಟಕ ಪ್ರದರ್ಶನಗೊಂಡಿತು.  | Kannada Prabha

ಸಾರಾಂಶ

ಜಾತಿ ವ್ಯವಸ್ಥೆ ತೊಡೆದು ಹಾಕಬೇಕು. ಅಸ್ಪೃಶ್ಯತೆಯಿಂದ ಸಮಾಜವನ್ನು ಮುಕ್ತಗೊಳಿಸಬೇಕು.

ಬಳ್ಳಾರಿ: ಬಾಬಾ ಸಾಹೇಬ್ ಅಂಬೇಡ್ಕರ್ ಸಾಮಾಜಿಕ ಸಮಾನತೆಗೆ ಬದುಕಿನುದ್ದಕ್ಕೂ ಶ್ರಮಿಸಿದರು ಎಂದು ಮೋಕಾ ಠಾಣೆ ಪಿಎಸ್‌ಐ ಎ.ಕಾಳಿಂಗ ತಿಳಿಸಿದರು.

ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಮೋಕ ಶಾಲೆಯಲ್ಲಿ (ಬಿ.ಡಿ.ಹಳ್ಳಿ) ಮಹದೇವ ತಾತ ಕಲಾ ಸಂಘ ಹಂದ್ಯಾಳು ಶುಕ್ರವಾರ ಆಯೋಜಿಸಿದ್ದ ಗೀತ ಗಾಯನ ಮತ್ತು ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ತೊಡೆದು ಹಾಕಬೇಕು. ಅಸ್ಪೃಶ್ಯತೆಯಿಂದ ಸಮಾಜವನ್ನು ಮುಕ್ತಗೊಳಿಸಬೇಕು. ಪ್ರತಿಯೊಬ್ಬರಿಗೂ ಗೌರವಯುತ ಸಾಮಾಜಿಕ ಸ್ಥಾನಮಾನ ಸಿಗಬೇಕು ಎಂಬ ಆಶಯ ಹೊಂದಿದ್ದರು. ಶಿಕ್ಷಣ ಮತ್ತು ಜ್ಞಾನಕ್ಕಾಗಿ ಹೆಚ್ಚಿನ ಆದ್ಯತೆ ನೀಡಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ, ಮಹಿಳಾ ಸಬಲೀಕರಣ, ಸ್ವಾಭಿಮಾನದ ಬದುಕು ಹಾಗೂ ಸ್ವಾವಲಂಬಿ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದ್ದರು. ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಕಾರ್ಯವಾಗಬೇಕಿದೆ. ಪ್ರತಿಯೊಬ್ಬರು ಸ್ವಾವಲಂಬನೆ ಸಾಧಿಸಬೇಕಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನವು ಎಲ್ಲ ಸಮುದಾಯಗಳಿಗೂ ವಿದ್ಯೆ, ಉದ್ಯೋಗ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮಾನ, ನ್ಯಾಯಯುತ ಅವಕಾಶಗಳನ್ನು ಕಲ್ಪಿಸಿದೆ.

ಅಂಬೇಡ್ಕರ್ ಅವರ ಸಾಧನೆಯಲ್ಲಿ ರಮಾಬಾಯಿ ಅವರ ಪಾತ್ರ ಸರ್ವ ಶ್ರೇಷ್ಠವಾದದ್ದು, ಅಂಬೇಡ್ಕರ್ ಅವರ ಸಂವಿಧಾನದಿಂದಲೇ ನಾನು ಇಂದು ಈ ಸ್ಥಾನ ದೊರೆತಿದೆ ಎಂದರು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಹಾಗೂ ಲೇಖಕ ಭುವನೇಶ್ ಕುಂಬಾರ, ಇಂತಹ ನಾಟಕಗಳು ಮಕ್ಕಳಲ್ಲಿ ಜ್ಞಾನದ ಜೊತೆಗೆ ತ್ಯಾಗದ ಮನೋಭಾವ ಹೆಚ್ಚಿಸುತ್ತವೆ ಎಂದರು.

ಮಹದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಮಾತನಾಡಿ, ಜೀವನದ ಪಾಠ ಕಲಿಯಲು ರಂಗಭೂಮಿ ದಾರಿದೀಪವಾಗುತ್ತದೆ. ಶಾಲಾ ಮಕ್ಕಳಿಗೆ ಇಂತಹ ಮಹಾನ್ ನಾಯಕರ ನಾಟಕಗಳು ಅತ್ಯವಶ್ಯಕ. ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ನಮ್ಮ ಸಂಘದಿಂದ ಇಂತಹ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರಾದ ಅನುಸೂಯ ಕೆ. ಮಾತನಾಡಿ, ಇಂತಹ ನಾಟಕಗಳ ಪ್ರದರ್ಶನದಿಂದ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಯುತ್ತದೆ ಎಂದರು.

ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು, ಪಿಎಸ್‌ಐ ಕಾಳಿಂಗ, ಸಾಹಿತಿ ಭುವನೇಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ಹಾಗೂ ಸಂಧ್ಯಾ ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು.

ಬಾಗಲಕೋಟೆಯ ಸಂಗಮ ಕಲಾ ತಂಡದವರು ಅಂಬೇಡ್ಕರ್ ಜೀವನ ಕುರಿತು ಪ್ರದರ್ಶಿಸಿದ ನಾಟಕ ಗಮನ ಸೆಳೆಯಿತು. ಗೌರಿ ಮತ್ತು ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾ ದಾಳಿ ವಿರೋಧಿಸಿ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ
ಬೇಡ್ತಿ - ಅಘನಾಶಿನಿ ಯೋಜನೆಯನ್ನು ಸಂಘಟಿತವಾಗಿ ನಿಲ್ಲಿಸಿ: ಸ್ವರ್ಣವಲ್ಲಿ ಶ್ರೀ