ಪುತ್ತೂರು: ವಿದ್ಯಾರ್ಜನೆ ಎಂಬುದು ಹಣ ಗಳಿಸುವುದಕ್ಕೆ ಇರುವ ವ್ಯವಸ್ಥೆ ಎಂದು ಭಾವಿಸಬಾರದು. ಜ್ಞಾನವನ್ನು ಹೊಂದಿ ಅದನ್ನು ದೇಶದ ಉನ್ನತಿಕೆಗಾಗಿ ಬಳಸುವ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಮೂಡಬೇಕಿದೆ. ಈ ಹಿನ್ನೆಲೆಯಲ್ಲಿ ಹೆತ್ತವರು ಮಕ್ಕಳ ಉತ್ಕೃಷ್ಟ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಬೇಕಾದ ಅಗತ್ಯವಿದೆ ಎಂದು ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವತಿಯಿಂದ ಶನಿವಾರ ಮೂರು, ನಾಲ್ಕು ಹಾಗೂ ಐದು ವರ್ಷದ ಪುಟಾಣಿಗಳಿಗಾಗಿ ಆಯೋಜಿಸಿದ ಶ್ಲೋಕ ಭಾರತೀ ಎಂಬ ಶ್ಲೋಕ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ಗೌರಿ ಸ್ವಾಗತಿಸಿದರು. ಶಿಕ್ಷಕ ಹೇಮಂತ್ ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.