ರಕ್ತ ಕೊಟ್ಟು ಜೀವ ಉಳಿಸಿದ ಆ್ಯಂಬುಲೆನ್ಸ್ ಚಾಲಕ

KannadaprabhaNewsNetwork | Published : Apr 17, 2025 12:05 AM

ರಕ್ತದ ಕೊರತೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯ ಜೀವವನ್ನು ಆ್ಯಂಬುಲೆನ್ಸ್ ಚಾಲಕ ಉಳಿಸಿದ್ದಾರೆ.

ದಾಂಡೇಲಿ: ರಕ್ತದ ಕೊರತೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯ ಜೀವವನ್ನು ಆ್ಯಂಬುಲೆನ್ಸ್ ಚಾಲಕ ಉಳಿಸಿದ್ದಾರೆ. ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಈ ಘಟನೆ ನಡೆದಿದೆ.

ಸಮೀಪದ ಅಂಬಿಕಾನಗರದ ಭಾಗೀರತಿ ಬಾಬು ಕೊಕರೆ ಎಂಬ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಿಜೇರಿಯನ್‌ ಹೆರಿಗೆ ಸಂದರ್ಭದಲ್ಲಿ ಮಹಿಳೆಗೆ ರಕ್ತಸ್ರಾವವಾಗಿ ಜೀವಕ್ಕೆ ಅಪಾಯವಾಗುವ ಹಂತಕ್ಕೆ ತಪುಲಿತ್ತು. ಮಹಿಳೆಯ ಜೀವ ಉಳಿಸಲು ಮಹಿಳೆಗೆ ತುರ್ತು ಒ ಪಾಸಿಟಿವ್‌ ರಕ್ತ ಬೇಕಾಗಿತ್ತು. ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕ ಚಿದಾನಂದ ಮೇತ್ರಿ ಅವರಿಗೆ ಫೋನ್ ಕರೆ ಮಾಡಿ ಒ ಪಾಸಿಟಿವ್ ರಕ್ತ ಬೇಕು ಎಂದು ತಿಳಿಸಿದಾಗ, ತಕ್ಷಣ ಸ್ಪಂದಿಸಿದ ಚಿದಾನಂದ ಮೆತ್ರಿ ರಕ್ತ ನೀಡಿ ಮಹಿಳೆಯನ್ನು ಬದುಕಿಸಿದ್ದಾರೆ. ಅವರ ತುರ್ತು ಸ್ಪಂದನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚಿದಾನಂದ ಮೇತ್ರಿ ಇಂದು ಮಾಡಿದ ಸಹಾಯ ಮೆಚ್ಚುಗೆ ಪಡುವಂತಹದ್ದು. ಇಂತಹ ತುರ್ತು ಸಂದರ್ಭದಲ್ಲಿ ರಕ್ತ ಬೇಕು ಎಂದಾಗ ದೂರದ ಹುಬ್ಬಳ್ಳಿ ಕಡೆಗೆ ಮುಖ ಮಾಡುವ ಸ್ಥಿತಿ ಇದೆ. ದಾಂಡೇಲಿ ಬ್ಲಡ್‌ ಬ್ಯಾಂಕ್‌ಗೆ ತಕ್ಷಣ ಒಬ್ಬ ಫಿಜಿಶಿಯನ್‌ ನೇಮಕ ಮಾಡಬೇಕು. ಖಾಸಗಿ ಆಸ್ಪತ್ರೆಗಳು ನಮ್ಮಿಂದ ಆದಷ್ಟು ಸೌಲತ್ತು ಪಡೆದುಕೊಳ್ಳುತ್ತವೆ. ಆದರೆ ನಮ್ಮಲಿನ ರೋಗಿಗಳಿಗೆ ತುರ್ತು ಸೇವೆ ಕೇಳಿದರೆ ಸ್ಪಂದಿಸುವುದಿಲ್ಲ ಎಂದು ವೈದ್ಯಾಧಿಕಾರಿ ಡಾ.ಅನೀಲ ನಾಯ್ಕ ಬೇಸರ ವ್ಯಕ್ತಪಡಿಸಿದರು.

ನಾವು ಆ್ಯಂಬುಲೆನ್ಸ್ ಚಾಲಕರಾಗಿ ಸೇವೆ ನೀಡುವುದಷ್ಟೇ ನಮ್ಮ ಕರ್ತವ್ಯವಲ್ಲ. ನಮ್ಮಿಂದ ಆದಷ್ಟು ಸೇವೆಯನ್ನು ಜನರಿಗೆ ಮಾಡಿದಾಗ ಮಾತ್ರ ನಮ್ಮ ಬದುಕಿಗೊಂದು ಕಿಮ್ಮತ್ತು ಇರುತ್ತದೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಆ ಮಹಿಳೆಗೆ ರಕ್ತದ ಅವಶ್ಯಕತೆ ಬಂದಾಗ ನನ್ನ ಸ್ನೇಹಿತ ಬಾಬು ಎಂಬವರಿಂದ ರಕ್ತ ಕೊಡಿಸಿದ್ದೇವೆ ಎನ್ನುತ್ತಾರೆ ಆ್ಯಂಬುಲೆನ್ಸ್ ಚಾಲಕ ಚಿದಾನಂದ ಮೇತ್ರಿ.