ಕುಮಟಾದಲ್ಲಿ ಮನೆಗೊಂದು ಗ್ರಂಥಾಲಯಕ್ಕೆ ಪುಸ್ತಕ ವಿತರಣೆ
ಕನ್ನಡ ಪುಸ್ತಕಗಳನ್ನು ಕೊಂಡು, ಓದುವವರಿಲ್ಲ ಎಂಬ ಕೊರಗು ಸಾಹಿತ್ಯ ಮತ್ತು ಪ್ರಕಾಶನ ಲೋಕದಲ್ಲಿ ದಿನಂಪ್ರತಿ ಹೆಚ್ಚಾಗುತ್ತಿದೆ. ಹೀಗೆ ಭವಿಷ್ಯದ ಆತಂಕದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಧಿಕಾರವು ಮಹತ್ವಕಾಂಕ್ಷಿಯಾಗಿ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ವಿವೇಕನಗರದ "ಶಿವರಾಮ " ಕಟ್ಟಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮನೆಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಗ್ರಂಥಾಲಯಕ್ಕೆ ಪುಸ್ತಕ ವಿತರಿಸಿ ಅವರು ಮಾತನಾಡಿದರು. ಮನೆಯಲ್ಲೊಂದು ಗ್ರಂಥಾಲಯವಿದ್ದರೆ ಅದು ಇಡೀ ಕುಟುಂಬದ ಜ್ಯೋತಿಯಾಗಿ ಮನೆ ಮತ್ತು ಮನಸ್ಸುಗಳನ್ನು ಬೆಳಗಲು ಸಾಧ್ಯ ಎಂದರು.ವನಿತಾ ನಾಯ್ಕ, ಮಾದೇವಿ ಪಟಗಾರ, ಈಶ್ವರ ಮುಕ್ರಿ, ಪ್ರವೀಣ ಮಡಿವಾಳ ಅವರಿಗೆ ಮನೆಯಲ್ಲಿ ಗ್ರಂಥಾಲಯ ರಚಿಸಲು ಪುಸ್ತಕ ನೀಡಿದರು.
ಡಾ. ದಯಾನಂದ ಭಟ್ ಮಾತನಾಡಿ, ಪುಸ್ತಕ ಸಂಸ್ಕೃತಿ ಮತ್ತು ಅದರ ಮಹತ್ವ ತುಂಬಾ ಪರಿಣಾಮಕಾರಿಯಾಗಿದ್ದು, ಪುಸ್ತಕದ ಓದಿನ ಜ್ಞಾನಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ ಎಂದರು.
ರೋಹಿದಾಸ ನಾಯ್ಕ ವಿರಚಿತ ಕತ್ತಲೆ ದಾರಿ ದೂರ ಕಥಾಸಂಕಲನವನ್ನು ಲೇಖಕಿ ಮಮತಾ ನಾಯ್ಕ ಪರಿಚಯಿಸಿದರು. ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಪ್ರಮೋದ ನಾಯ್ಕ, ರವೀಂದ್ರ ಭಟ್ ಸೂರಿ, ಸಂಚಾಲಕ ಎಸ್.ಎಚ್. ಗುನಗ, ಯಮುನಾ ಗಾಂವ್ಕರ್ ಉಪಸ್ಥಿತರಿದ್ದರು.