ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ತಾಲೂಕಿನಲ್ಲಿರುವ ಪೆರ್ಡೂರಿನ ಅನಂತಪದ್ಮನಾಭ ದೇವಾಲಯದಲ್ಲಿ ಪುರಾಣೋಕ್ತ ಕಥಾನಕದ ನಿರೂಪಣಾ ಶಿಲ್ಪಗಳಿರುವ ಅಪರೂಪದ ದೀಪ ಒಂದು ಕಂಡು ಬಂದಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಮತ್ತು ಆದಿಮ ಕಲಾ ಟ್ರಸ್ಟ್ ಉಡುಪಿ ಇದರ ಸ್ಥಾಪಕ ಸದಸ್ಯ ಪ್ರೊ. ಮುರುಗೇಶಿ ಟಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದುಂಡನೆಯ ತಳ ಹೊಂದಿರುವ ದೀಪದ ಮೇಲ್ಭಾಗದಲ್ಲಿ ಕಮಾನಿನ ಆಕಾರದ ಅತ್ಯಂತ ಕಲಾತ್ಮಕವಾದ ಫಲಕವಿದೆ. ಈ ಫಲಕದ ಎರಡೂ ಬದಿಗಳಲ್ಲಿ ಶೈವ ಮತ್ತು ವೈಷ್ಣವ ಪಂಥದ ಶಿಲ್ಪಗಳಿದ್ದು, ದೇವಾಲಯದ ಶೈವ ಮತ್ತು ವೈಷ್ಣವ ಪರಂಪರೆಯ ಅಪರೂಪದ ಪ್ರತೀಕವಾಗಿದೆ. ದೀಪದ ಮೊದಲ ಮುಖದ ಮಧ್ಯದಲ್ಲಿ ಕಾಲಪುರುಷನ ಮೇಲೆ ನಿಂತಿರುವ ನಟರಾಜನ ಶಿಲ್ಪವಿದೆ. ಎಡ-ಬಲದಲ್ಲಿ ನಗಾರಿ ಬಾರಿಸುವ ಗಣಧಾರಿ ಹಾಗೂ ತಾಳವನ್ನು ನುಡಿಸುತ್ತಿರುವ ಭೃಂಗಿಯ ಶಿಲ್ಪಗಳಿವೆ. ಭೃಂಗಿಯ ಬಲಭಾಗದಲ್ಲಿ ಖಡ್ಗರಾವಣ ಮತ್ತು ಕುಮಾರ ಶಿಲ್ಪಗಳಿವೆ.
ಖಡ್ಗ ರಾವಣ ಅರೆ ಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನನಾಗಿದ್ದಾನೆ. ಕುಮಾರ ಮಯೂರವಾಹನನಾಗಿದ್ದಾನೆ. ನಗಾರಿ ಬಾರಿಸುವ ಗಣಧಾರಿಯ ಎಡಕ್ಕೆ ನಂದಿವಾಹನೆ ಪಾರ್ವತಿ ಮತ್ತು ಮೂಷಕ ವಾಹನ ಗಣಪತಿಯ ಶಿಲ್ಪಗಳಿವೆ. ಈ ಶಿಲ್ಪಗಳು ಅತ್ಯಂತ ಸ್ಪಷ್ಟವಾಗಿ ಶಿವನ ಪ್ರಳಯ ತಾಂಡವ ಸನ್ನಿವೇಶವನ್ನು ಚಿತ್ರಿಸುತ್ತವೆ. ಇದರಿಂದ ಮೂರು ಲೋಕಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ.ಎರಡನೇ ಮುಖದ ಮಧ್ಯದಲ್ಲಿ ಅನಂತಪದ್ಮನಾಭ ಸಮುಭಂಗಿಯಲ್ಲಿ ನಿಂತಿದ್ದಾನೆ. ಆತನ ಬಲಭಾಗದಲ್ಲಿ ಇಂದ್ರ ಮತ್ತು ಬ್ರಹ್ಮ ಹಾಗೂ ಎಡಭಾಗದಲ್ಲಿ ಅಗ್ನಿ ಮತ್ತು ವರುಣನ ಶಿಲ್ಪಗಳಿವೆ. ಶಿವನ ಪ್ರಳಯ ತಾಂಡವ ನೃತ್ಯದಿಂದ ಭೀತಿಗೊಂಡ ದೇವತೆಗಳು ಬ್ರಹ್ಮನ ಜೊತೆಗೂಡಿ ವೈಕುಂಠಕ್ಕೆ ತೆರಳಿ ನಾರಾಯಣನಲ್ಲಿ ಪ್ರಾರ್ಥನೆ ಮಾಡಿದಾಗ ಮೂರು ಲೋಕಗಳ ಪಾಲಕನಾದ ಅನಂತಪದ್ಮನಾಭ ದೇವತೆಗಳಿಯ ಅಭಯ ನೀಡಿ ಶಿವನ ಕೋಪವನ್ನು ಶಮನಗೊಳಿಸುತ್ತಾನೆ. ಅನಂತಪದ್ಮನಾಭ ತನ್ನ ಎರಡೂ ಕೈಗಳಲ್ಲಿ ಉದ್ದರಣೆಯನ್ನು ಹಿಡಿದು ನಿಂತಂತೆ ಶಿಲ್ಪವನ್ನು ಚಿತ್ರಿಸಲಾಗಿದೆ. ಈ ಶಿಲ್ಪದ ಕೆಳಭಾಗದಲ್ಲಿ ನಿಂತಿರುವ ಗರುಡನ ಶಿಲ್ಪವಿದೆ. ಇದರ ಹಿಂಭಾಗದಲ್ಲಿ ಅಂಜಲೀ ಮುದ್ರೆಯಲ್ಲಿ ಕುಳಿತು ಶಾಂತವಾಗಿ ಅನಂತಪದ್ಮನಾಭನನ್ನು ಪ್ರಾರ್ಥಿಸುತ್ತಿರುವ ಶಿವನ ಶಿಲ್ಪವಿದೆ. ದೀಪದ ಎರಡೂ ಬದಿಗಳಲ್ಲಿ ತಲಾ ಎರಡು ಆಕರ್ಷಕವಾದ ಸಿಂಹಗಳ ಶಿಲ್ಪಗಳಿವೆ.
ದೇವಾಲಯದ ಒಳಪ್ರಾಕಾರದಲ್ಲಿ ಬಸವಣ್ಣರಸ ಬಂಗನ ಕ್ರಿ.ಶ. ೧೪೫೬ ಶಾಸನವಿದೆ. ಆ ಶಾಸನದಲ್ಲಿ, ಬಸವಣ್ಣರಸ ಬಂಗನು ದೇವಾಲಯಕ್ಕೆ ನೀಡಿದ ಎರಡು ಕಂಚಿನ ದೀಪದ ಉಲ್ಲೇಖವಿದೆ. ದೀಪದಲ್ಲಿರುವ ಶಿಲ್ಪದ ಲಕ್ಷಣಗಳು ಮತ್ತು ಶಾಸನದ ಉಲ್ಲೇಖದ ಆಧಾರದ ಮೇಲೆ ಈ ದೀಪದ ಕಾಲವನ್ನು ೧೫ನೇ ಶತಮಾನದ ದೀಪವೆಂದು ನಿರ್ಣಯಿಸಲಾಗಿದೆ.ದೀಪದಲ್ಲಿರುವ ಖಡ್ಗ ರಾವಣನ ಶಿಲ್ಪ ಅತ್ಯಂತ ಕುತೂಹಲಕರವಾಗಿದೆ. ಅರೆಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನವಾಗಿರುವ ಖಡ್ಗ ರಾವಣ ತನ್ನ ಬಲಮುಂದಿನ ಕೈಯಲ್ಲಿ ಖಡ್ಗ ಹಾಗೂ ಹಿಂದಿನ ಕೈಯಲ್ಲಿ ನೇಗಿಲನ್ನು ಹಿಡಿದಿದ್ದಾನೆ. ಎಡಮುಂದಿನ ಕೈಯಲ್ಲಿ ಕಪಾಲ ಅಥವಾ ಪಾನಪಾತ್ರೆಯಿದೆ ಹಾಗೂ ಎಡಹಿಂದಿನ ಕೈಯಲ್ಲಿ ರುಂಡವಿದೆ. ಈ ಶಿಲ್ಪ ಲಕ್ಷಣಗಳು ಖಡ್ಗ ರಾವಣ ಪಾಲಕ ಮತ್ತು ವಿನಾಶಕ ಶಕ್ತಿಯ ದ್ಯೋತಕವಾಗಿದೆ. ದೇವಾಲಯದ ಹೊರ ಆವರಣದಲ್ಲಿ ಖಡ್ಗ ರಾವಣನನ್ನು ದೇವಾಲಯದ ಪ್ರಬಲ ರಕ್ಷಕ ದೈವವಾಗಿ ಆರಾಧಿಸಲಾಗುತ್ತಿರುವುದು ವಿಶೇಷವಾಗಿದೆ. ಈ ಅಧ್ಯಯನಕ್ಕೆ ನೆರವಾದ ದೇವಾಲಯದ ಆಡಳಿತ ಮಂಡಳಿಯ ಅನುವಂಶಿಕ ಮೊಕ್ತೇಸರ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್, ದೇವಾಲಯದ ಪ್ರಧಾನ ಅರ್ಚಕರು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಮತ್ತು ಈ ಅಪರೂಪದ ಶೋಧನೆಗೆ ನೆರವಾದ ಆದಿಮ ಕಲಾ ಟ್ರಸ್ಟ್ ಉಡುಪಿಯ ಸಂಶೋಧನಾ ತಂಡದ ಸದಸ್ಯರಿಗೆ ಪ್ರೊ.ಮುರುಗೇಶಿ ಧನ್ಯವಾದ ಸಮರ್ಪಿಸಿದ್ದಾರೆ.