3 ದಶಕಗಳಿಂದ ಭರವಸೆಯಲ್ಲೇ ಉಳಿದ ಬಯಲುರಂಗ ಮಂದಿರ!

KannadaprabhaNewsNetwork |  
Published : Feb 05, 2026, 01:30 AM IST
ದೊಡ್ಡಬಳ್ಳಾಪುರದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಬಯಲುರಂಗ ಮಂದಿರ ನಿರ್ಮಾಣದ ಕನಸು ಕಳೆದ 3 ದಶಕಗಳಿಂದ ಕೇವಲ ಭರವಸೆಗಳಲ್ಲೇ ಉಳಿದಿರುವುದು ವಿಷಾದನೀಯ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್‌ ಹೇಳಿದರು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಬಯಲುರಂಗ ಮಂದಿರ ನಿರ್ಮಾಣದ ಕನಸು ಕಳೆದ 3 ದಶಕಗಳಿಂದ ಕೇವಲ ಭರವಸೆಗಳಲ್ಲೇ ಉಳಿದಿರುವುದು ವಿಷಾದನೀಯ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್‌ ಹೇಳಿದರು.

ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ತಾಲೂಕು ಕಲಾವಿದರ ಸಂಘ, ನಗರಸಭೆ, ಕನ್ನಡ ಜಾಗೃತ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆರಂಭವಾದ 3 ದಿನಗಳ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಗಭೂಮಿ ಚಲನಶೀಲವಾಗಿರಬೇಕಾದರೆ ಆಧುನಿಕತೆಯನ್ನು ಮೈಗೂಡಿಸಿಕೊಂಡು ಹೊಸ ಪ್ರಯೋಗಗಳು ಪ್ರದರ್ಶಿತವಾಗಬೇಕು. ಹವ್ಯಾಸಿ ಕಲಾವಿದರಿಗೆ ಸಮುದಾಯದ ಸಹಕಾರ ಅಗತ್ಯ. ನಗರದ ತೇರಿನ ಬೀದಿ ಸಮೀಪ ಸರ್ವೆ ನಂ.25ರಲ್ಲಿ ಬಯಲುರಂಗ ಮಂದಿರ ನಿರ್ಮಾಣಕ್ಕೆ ಜಾಗ ಮೀಸಲಿರಿಸುವಂತೆ ಒತ್ತಾಯಿಸಲಾಗಿದೆ. ಆದರೆ ಇಲ್ಲಿ ಇತರರಿಗೂ ಜಮೀನು ನೀಡಲಾಗಿದೆ. ಶಾಲಾ ಮೈದಾನಕ್ಕೆ ನೀಡಿರುವ ಜಾಗದಲ್ಲೇ ಬಯಲು ರಂಗಮಂದಿರ ನಿರ್ಮಾಣವಾದರೆ ಶಾಲೆ ಮತ್ತು ಕಲಾಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.

ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್‌ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಮೇರು ಕಲಾವಿದರಿದ್ದು, ಹೆಚ್ಚಿನ ಮಂದಿ ಮಾಸಾಶನ ಪಡೆಯುತ್ತಿದ್ದಾರೆ. ಇಂತಹ ಕಲಾವಿದರಿಗೆ ಜಾತ್ರಾ ನಾಟಕೋತ್ಸವ ಉತ್ತಮ ವೇದಿಕೆ ನೀಡಿದೆ. ದಶಕಗಳಿಂದ ಬಂದಿರುವ ಈ ಪರಂಪರೆ ಮುಂದುವರೆದು ಕಲಾವಿದರಿಗೆ ಆಶ್ರಯ ನೀಡಲಿ ಎಂದು ಆಶಿಸಿದರು.

ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಮಾತನಾಡಿ, ಕಲಾವಿದರು ಹಣ ಹಾಕಿ ಕಲಾ ಪ್ರದರ್ಶನ ನೀಡಬೇಕಿದೆ. ಈ ವೇದಿಕೆಯಲ್ಲಿಯೂ ಸಹ ದಾನಿಗಳ ಸಹಕಾರವಿಲ್ಲದಿದ್ದರೆ ಆಗುವುದಿಲ್ಲ. ಈ ದಿಸೆಯಲ್ಲಿ ಇದಕ್ಕೆ ದತ್ತಿ ನಿಧಿ ಸ್ಥಾಪಿಸುವ ಅಗತ್ಯವಿದೆ ಎಂದರು.

ಹಲವು ಸಂಘಟನೆಗಳ ಮುಖಂಡರು ಮಾತನಾಡಿ, ವೆಂಕಟರಮಣಸ್ವಾಮಿ ಜಾತ್ರೆ ವೇಳೆ ನಡೆಸಿಕೊಂಡು ಬರುತ್ತಿರುವ ನಾಟಕೋತ್ಸವ 40 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಇದಕ್ಕೆ ಕಲಾಪ್ರೇಮಿಗಳ ಸಹಯೋಗ ಕಾರಣವಾಗಿದೆ. ಪೌರಾಣಿಕ ನಾಟಕಗಳ ಆಯೋಜನೆ ಲಕ್ಷಾಂತರ ರುಪಾಯಿ ವೆಚ್ಚವಾಗುತ್ತಿದ್ದು, ಸಮುದಾಯ ಇದಕ್ಕೆ ಕೈಜೋಡಿಸಬೇಕಿದೆ. ಸರ್ಕಾರ ಕಲೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲಾವಿದರಿಗೆ ಹೆಚ್ಚಿನ ಧನ ಸಹಾಯ ನೀಡುವುದರೊಂದಿಗೆ ಕಲಾಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದೆ ಎಂದರು.

30 ವರ್ಷಗಳಿಂದ ಕಲಾವಿದರ ಆಶೋತ್ತರ ಈಡೇರಿಲ್ಲ. ಸಾಂಸ್ಕೃತಿಕ ಪರಂಪರೆ ಗಟ್ಟಿಯಾಗಿರುವ ದೊಡ್ಡಬಳ್ಳಾಪುರದಲ್ಲಿ ಅಪ್ರತಿಮ ಕಲಾವಿದರಿದ್ದಾರೆ. ಅವರ ಕಲಾ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡತುಮಕೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್, ಅನಿಕೇತನ ಟ್ರಸ್ಟ್‌ನ ಕಾರ್ಯದರ್ಶಿ ಡಿ.ಶ್ರೀಕಾಂತ ಮತ್ತಿತರರು ಮಾತನಾಡಿದರು.

ನಗರಸಭೆ ಸದಸ್ಯೆ ವತ್ಸಲ, ರಂಗ ನಿರ್ದೇಶಕ ಮಾ.ಚಿ.ಕೃಷ್ಣ, ತಾಲೂಕು ಕಲಾವಿದರ ಸಂಘದ ಎಂ.ವೆಂಕಟರಾಜು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಪ್ರಕಾಶ್ ರಾವ್, ಡಿ.ವೆಂಕಟೇಶ್, ಮುನಿಪಾಪಯ್ಯ, ನಂದ ಕುಮಾರ್, ಜಿ.ರಾಮು, ಮುಖಂಡರಾದ ಡೈರಿ ಶ್ರೀನಿವಾಸ್‌, ತಳವಾರ ನಾಗರಾಜ್, ನರಸಿಂಹಮೂರ್ತಿ, ಕುಮಾರ್‌, ಆನಂದ್‌, ಬಸವರಾಜಯ್ಯ ಮೊದಲಾದವರು ಭಾಗವಹಿಸಿದ್ದರು.

4ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?