ಕುದೂರು: ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶಿವದೇವಾಲಯಗಳಿಗೆ ಭೇಟಿ ನೀಡುವುದು ಶಿವಲಿಂಗುವಿನ ದರ್ಶನ ಮಾಡಿ ಅದಕ್ಕೆ ಬಿಲ್ವಪತ್ರೆಯನ್ನು ಅರ್ಚಿಸಿ ಬರುವುದು ಪದ್ಧತಿ. ಆದರೆ ಇಲ್ಲೊಂದು ಆಳೆತ್ತರದ ಲಿಂಗು ಸಾವಿರ ವರ್ಷಗಳಿಂದ ಹೊಲದ ಬಯಲಿನಲ್ಲಿ ಬಯಲಾಗಿ ಮಳೆ ಬಿಸಿಲು ಚಳಿಯೆನ್ನದೆ ತನ್ನ ಕಾಂತಿಯನ್ನು ಕುಗ್ಗಿಸಿಕೊಳ್ಳದೆ ಒಳಿತನ್ನು ಬರಲೆಂದೇ ಒಂದು ಮಹೂರ್ತಕ್ಕೆ ಕಾದು ಕುಳಿತಿದೆಯೇನೋ ಎಂಬಂತೆ ತನ್ನ ಹೊಳಪನ್ನು ಹೊರಸೂಸುತ್ತಾ ನಿಂತುಕೊಂಡಿದೆ.
ಗಂಗರ ಮನೆತನದ ಅರಸ ಶ್ರೀಪುರುಷ ಈ ಶಿವಲಿಂಗುವನ್ನು ನಿರ್ಮಾಣ ಮಾಡಿಸಿದನು ಎಂಬುದು ಇತಿಹಾಸ. ಸಾವಿರ ವರ್ಷಗಳಾದರು ಈ ಲಿಂಗುವಿನ ಕಾಂತಿ ಕಡಿಮೆಯಾಗಿಲ್ಲ. ಅದರ ಬಾಳಿಕೆ ಲೆಕ್ಕವಿಲ್ಲದಷ್ಟು ಕಾಲಕ್ಕೂ ಇರುತ್ತದೆ ಎಂಬಂತೆ ಎಲ್ಲೂ ಶಿಥಿಲಗೊಳ್ಳದೆ ಹೊಲದ ದಿಬ್ಬದ ಮೇಲೆ ನಿಂತುಕೊಂಡಿದೆ.
ಈ ದೇವರನ್ನು ಸರ್ಪವೊಂದು ತನ್ನ ಭಕ್ತಿಯ ಸೂಚಕವಾಗಿ ಆಗಾಗ್ಗೆ ಲಿಂಗುವಿನ ಬಳಿಗೆ ಬಂದು ಪ್ರದಕ್ಷಿಣೆ ಹಾಕಿ ಹೋಗುತ್ತದೆ ಎಂಬುದು ಜನರ ನಂಬಿಕೆ. ಲಿಂಗುವಿನ ಸಮೀಪದಲ್ಲಿಯೇ ಇತ್ತೀಚೆಗೆ ಪುಟ್ಟದೊಂದು ಶಿವದೇವಾಲಯ ನಿರ್ಮಾಣ ಮಾಡಲಾಗಿದೆ.ಬಿಸ್ಕೂರು ಗ್ರಾಮವನ್ನು ಪಂಚಲಿಂಗೇಶ್ವರ ಗ್ರಾಮ ಎಂದು ಹಿಂದೆ ಕರೆಯಲಾಗುತ್ತಿತ್ತು. ಅದರಲ್ಲಿ ಎರಡು ಲಿಂಗುಗಳು ಹೊಸಪಾಳ್ಯದ ತೋಟದ ಸಾಲಿನ ಬೇಲಿಯಲ್ಲಿ ಮುರಿದ ಸ್ಥಿತಿಯಲ್ಲಿದೆ. ಇನ್ನೆರೆಡು ಲಿಂಗಗಳು ತೋಟದೊಳಗೆ ಪೂಜೆಯಿಲ್ಲದೆ ಶಿಥಿಲಾವಸ್ಥೆಯಲ್ಲಿದೆ. ಇದಕ್ಕೆ ಸಾಕ್ಷಿಯಾಗಿ ಗ್ರಾಮದಲ್ಲಿ ನಾಲ್ಕು ಶಾಸನಗಳಿದ್ದು, ಅದರಲ್ಲಿ ಒಂದು ಶಾಸನ ಮಾತ್ರ ಓದಲು ಯೋಗ್ಯವಾಗಿದೆ ಇದನ್ನು ಗಜಾಷ್ಠಕ ಬರೆದ ಗಂಗರ ದೊರೆ ಎರಡನೇ ಶಿವಮಾರ ಕೆತ್ತಿಸಿದ್ದು ಎಂಬುದು ದಾಖಲೆ,
ಬಿಸ್ಕೂರು ಗ್ರಾಮವನ್ನು ಪ್ರಾಚೀನದಲ್ಲಿ ಬಸ್ತೂರು, ಮಿಸ್ಗಿರಿ ಪಟ್ಟಣ, ಕುಬೇರೆ ಪಟ್ಟಣ ಎಂದು ಕೆರೆಯಲಾಗುತ್ತಿತ್ತು. ಇಂತಹ ಗ್ರಾಮದಲ್ಲಿರುವ ಹೊಳಪಿನ ಶಿವಲಿಂಗುವಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಅಭಿಷೇಕವನ್ನು ಏರ್ಪಡಿಲಾಗಿದೆ. ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.25ಕೆಆರ್ ಎಂಎನ್ 1.ಜೆಪಿಜಿ
ಮಾಗಡಿ ತಾಲೂಕು ಬಿಸ್ಕೂರು ಗ್ರಾಮದಲ್ಲಿ ಸಾವಿರ ವರ್ಷಗಳಿಂದ ಬಯಲಲ್ಲಿ ತನ್ನ ಹೊಳಪನ್ನು ಕಳೆದುಕೊಳ್ಳದೆ ನಿಂತಿರುವ ಶಿವಲಿಂಗು.