ರಟ್ಟೀಹಳ್ಳಿ: ತಾಲೂಕಿನ ಅಣಜಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕರ್ತವ್ಯ ಲೋಪ ಹಾಗೂ ಲಂಚ ಸ್ವೀಕಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್ ಆದೇಶ ಹೊರಡಿಸಿದ್ದಾರೆ.
ಸರ್ವೇ ನಂಬರ್ 95/ಎ/17ರ ರುದ್ರಭೂಮಿಗೆ ಮೀಸಲಿಟ್ಟ 2 ಎಕರೆ 10 ಗುಂಟೆ ಜಾಗ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಲಂಚ ಪಡೆದು ಆ ಜಾಗವನ್ನು ಮನೆ ಕಟ್ಟಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸಾರ್ವಜನಿಕರಿಂದ ಪೋನ್ ಪೇ ಮೂಲಕ ಲಂಚ ಪಡೆದು ಮನೆಗಳ ಹಾಗೂ ಖಾಲಿ ಜಾಗದ ಆಸ್ತಿಗಳನ್ನು ಇ ಸ್ವತ್ತು ಮಾಡಿದ ಆರೋಪ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಕೂಲಿ ಹಣವನ್ನು ನೀಡದೇ ನಿರ್ಲಕ್ಷ್ಯ ವಹಿಸಿದ ಕಾರಣದಿಂದಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.