ನಗರಾಧ್ಯಕ್ಷ ಸ್ಥಾನದ ಬಗ್ಗೆ ಗೊಂದಲದ ನಡುವೆ ಅವಿರೋಧ ಆಯ್ಕೆ । ಚುನಾವಣಾಧಿಕಾರಿ ಘೋಷಣೆ
ಸವಿತಾ ಸಮಾಜದ ಬೇಲೂರು ನಗರಾಧ್ಯಕ್ಷರಾಗಿ ಬಿ ಆರ್ ಆನಂದ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ನಗರಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಬಗ್ಗೆ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಅದರಂತೆ ಕಾನೂನಿನ ಪ್ರಕಾರ ಚುನಾವಣೆ ನಡೆಸಿ ನಗರಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಒಮ್ಮತದ ಅಭಿಪ್ರಾಯ ಬಂದ ಹಿನ್ನೆಲೆ ಮಂಗಳವಾರ ಬೆಳಿಗ್ಗೆಯಿಂದಲೇ ಚುನಾವಣೆ ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದ ರಂಗಮಂದಿರದ ಬಳಿ ನಡೆಸಲಾಗಿತ್ತು. ಪ್ರತಿಸ್ಪರ್ಧಿ ಯಾರೂ ಇಲ್ಲದ ಕಾರಣ ಬಿ.ಆರ್ ಆನಂದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪುಟ್ಟಸ್ವಾಮಿ ಘೋಷಿಸಿದರು.ಇದೇ ವೇಳೆ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಜಯರಾಂ, ಸವಿತಾ ಸಮಾಜ ಸಂಘ ನಗರ ಎಂದು ೨೦೦೫-೦೬ರಲ್ಲಿ ಸ್ಥಾಪನೆಯಾಗಿತ್ತು. ಆಗಿನಿಂದ ಚುನಾವಣೆ ಅಥವಾ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತ ಬಂದಿದ್ದೆವು.ಆದರೆ ಇತ್ತೀಚೆಗೆ ಕೆಲವರು ಇದರ ವಿಚಾರದಲ್ಲಿ ಗೊಂದಲ ಉಂಟು ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಮನದಲ್ಲಿಟ್ಟುಕೊಂಡು ನಗರಕ್ಕೆ ಅಧ್ಯಕ್ಷ ಚುನಾವಣೆ ನಡೆಸಿದ್ದು ಬಿಆರ್ ಆನಂದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದು ತಿಳಿಸಿದರು.
ಸವಿತಾ ಸಮಾಜದ ನೂತನ ನಗರಾಧ್ಯಕ್ಷ ಬಿ.ಆರ್. ಆನಂದ್ ಅವರನ್ನು ಸವಿತಾ ಸಮಾಜದ ಬಾಂಧವರು ಅಭಿನಂದಿಸಿದರು.