ಅನೀಮಿಯಾ, ಅಸ್ತಮಾ ತಪಾಸಣೆ, ಜಾಗೃತಿ
ಮಕ್ಕಳಲ್ಲಿ ಅನಿಮಿಯಾ (ರಕ್ತಹೀನತೆ) ಕೊರತೆ ಕಂಡುಬಂದಲ್ಲಿ ಓದಿನಲ್ಲಿ ಹಿಂದುಳಿಯುತ್ತಾರೆ. ಇದನ್ನು ಆರಂಭದ ಹಂತದಲ್ಲೇ ಪತ್ತೆ ಹಚ್ಚಿ ದೂರ ಮಾಡಿದಲ್ಲಿ, ಮಕ್ಕಳ ಬೆಳವಣಿಗೆ ಸಕಾರಾತ್ಮಕವಾಗಿ ಆಗುತ್ತದೆ ಎಂದು ಮಕ್ಕಳ ತಜ್ಞ, ಐಎಪಿ ಅಧ್ಯಕ್ಷ ಡಾ.ಸುರೇಶರೆಡ್ಡಿ ಹೇಳಿದರು.
ನಗರದ ನವನಂದಿ ಶಾಲೆಯಲ್ಲಿ ಭಾರತೀಯ ಚಿಕ್ಕಮಕ್ಕಳ ತಜ್ಞರ ಸಂಘದ ವತಿಯಿಂದ ಆಯೋಜಿಸಿದ್ದ ಅನೀಮಿಯಾ ಹಾಗೂ ಅಸ್ತಮಾ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರಿಯಾದ ಹಾಗೂ ಪೌಷ್ಟಿಕಾಂಶಯುಕ್ತ ಊಟ ಮಾಡಬೇಕು. ಅಲ್ಲದೆ ದೈಹಿಕ ಚಟುವಟಿಕೆಗಳಿಂದ ಕೂಡಿರುವ ದಿನಚರಿಯನ್ನು ಮಕ್ಕಳಿಗೆ ನಿಗದಿಪಡಿದರೆ ಸಮಸ್ಯೆ ಆಗುವುದಿಲ್ಲ. ಇದನ್ನು ಪಾಲಕರಿಗೆ ತಿಳಿವಳಿಕೆ ಕೊಡಬೇಕೆಂದು ಸಲಹೆ ನೀಡಿದರು.
ಪ್ರಾಂಶುಪಾಲ ರೇವಣಸಿದ್ದಪ್ಪ ಮಲಕೂಡ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತಹೀನತೆ ಇರುವ ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಆಟೋಟಗಳಲ್ಲಿಯೂ ಹಿಂದುಳಿಯುತ್ತಾರೆ. ಮಕ್ಕಳಲ್ಲಿ ಆಸಕ್ತಿ ಕಡಿಮೆಯಾದಲ್ಲಿ ಪಾಲಕರು ಹಾಗೂ ಶಿಕ್ಷಕರು ಗಮನ ಹರಿಸಿ ಮಕ್ಕಳ ಭೌತಿಕ ಬೆಳವಣಿಗೆಯತ್ತವೂ ಸಹ ಗಮನ ಹರಿಸಬೇಕು ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ ಪೂಜಾರಿ ಆಗಮಿಸಿದ್ದರು. ವೇದಿಕೆ ಮೇಲೆ ಐಎಪಿ ಅಧ್ಯಕ್ಷ ಡಾ. ಪ್ರಶಾಂತ ಬಾಸೂತ್ಕರ್, ಐಎಪಿ ಖಜಾಂಚಿ ರಾಘವೇಂದ್ರರೆಡ್ಡಿ ಕೊಯಿಲೂರ ಸೇರಿದಂತೆ ಶಾಲೆಯ ಮುಖ್ಯಗುರುಗಳು ಹಾಗೂ ಅಧಿಕಾರಿ ಶಿಕ್ಷಕ ವರ್ಗದವರು ಇದ್ದರು. ಬಸ್ಸುಗೌಡ ಶಿವರಾಯ ಎಲ್ಹೇರಿ ಅಧ್ಯಕ್ಷತೆ ವಹಿಸಿದ್ದರು. ಮೇಘಾ ಮಿಶ್ರಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ ಮಾಡಲಾಯಿತು.