ನರಗುಂದ: ಅಂಗನವಾಡಿ ಮಕ್ಕಳಿಗೆ ಶಿಕ್ಷಣ ಕಲಿಸಲು ತೊಂದರೆಯಾಗುತ್ತದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಎಸ್ಐಆರ್ ಗಣತಿ ಕಾರ್ಯದಿಂದ ಮುಕ್ತಿಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸದೆ ಇರುವುದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಕೆಲ ಅಂಗನವಾಡಿಯಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭವಾಗಿದ್ದು, ಈ ನಡುವೆ ಬಿಎಲ್ಒ ಕೆಲಸ ವಹಿಸಿದ್ದು, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹೇಗೆ ಶಿಕ್ಷಣ ಕೊಡಬೇಕು ಎಂಬ ಆತಂಕವಿದೆ. ಪಾಲಕರು ಮಕ್ಕಳನ್ನು ಕಳುಹಿಸಲು ನಿರಾಕರಿಸುತ್ತಾರೆ ಎಂದರು.
ಮೊದಲೆ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಇಲಾಖೆಯವರು ಕೊಟ್ಟ ಮೊಬೈಲ್ ಇದೆ. ಆ ಮೊಬೈಲ್ನಲ್ಲಿ ಬಿಎಲ್ಒ ಆ್ಯಪ್ ಬರಲ್ಲ. ಈ ಬಗ್ಗೆ ತಹಸೀಲ್ದಾರರನ್ನು ಕೇಳಿದಾಗ, ಬೇರೆ ಮೊಬೈಲ್ ಬಳಸಿ ಕೆಲಸ ಮಾಡಲು ಸೂಚಿಸಿದರು. ಗೌರವಧನದ ಆಧಾರದ ಮೇಲೆ ಕೆಲಸ ಮಾಡುವ ಕಾರ್ಯಕರ್ತೆಯರು ಹೆಚ್ಚಿನ ರ್ಯಾಮ್ ಇರುವ ಮೊಬೈಲ್ ಖರೀದಿಸಲು ಆಗುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆಯ ಮತ್ತು ಇಲಾಖೆಯೇತರ ಕೆಲಸ ನಿರ್ವಹಿಸುವುದರಿಂದ ಎಷ್ಟೋ ಜನ ಕಾರ್ಯಕರ್ತೆಯರಿಗೆ ಬಿಪಿ, ಶುಗರ್ ಒಕ್ಕರಿಸಿಕೊಂಡಿವೆ. ಕೆಲಸ ಹೊರೆಯಾಗಿದೆ. ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ಒ ಕೆಲಸದಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದರು.ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ವೆಂಕಪ್ಪ ಗಿರಿತಿಮ್ಮನವರ ಮನವಿ ಸ್ವೀಕರಿಸಿ ಮೇಲಧಿಕಾರಿಗಳಿಗೆ ರವಾನೆ ಮಾಡಲಾಗುವುದೆಂದರು.