ಹೊಸಪೇಟೆ: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಶಾಸಕ ಎಚ್.ಆರ್. ಗವಿಯಪ್ಪ ಅವರ ನಿವಾಸದ ಎದುರು ಶನಿವಾರ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.
ಮುಂಗಡವಾಗಿ ಮೊಟ್ಟೆ, ಬಾಡಿಗೆ, ಗ್ಯಾಸ್, ಕರೆಸ್ಸಿ ಹಣ, ತರಕಾರಿ, ಆಡಳಿತ ವೆಚ್ಚ, ಸಾದಿಲ್ವಾರು ಹಾಕದೇ ಫಲಿತಾಂಶ ಕೇಳಬಾರದು. ನೌಕರರಿಗೆ ಸಾಮೂಹಿಕ ಆರೋಗ್ಯ ವಿಮೆ ಜಾರಿ ಮಾಡಬೇಕು. ಅಂಗನವಾಡಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ನೀಡಬೇಕು. ಎಫ್ ಆರ್ ಎಸ್ ಕೈಬಿಡಬೇಕು ಅಂಗನವಾಡಿ ಕೇಂದ್ರಕ್ಕೆ ಗುಣಮಟ್ಟದ ಮೊಬೈಲ್ ನೀಡಬೇಕು ಮತ್ತು ವೈಪೈ ವ್ಯವಸ್ಥೆ ಕಲ್ಪಿಸಬೇಕು ಎಂದರು.
ರಾಜ್ಯ ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ದುಡಿಯುವ ಮಹಿಳೆಯರಿಗೆ ನೀಡಿರುವ ಮುಟ್ಟಿನ ರಜೆ ಅಂಗನವಾಡಿ ಕಾರ್ಯಕರ್ತೆಸಹಾಯಕಿಗೂ ಜಾರಿ ಮಾಡಬೇಕು. ಅಂಗನವಾಡಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ ಮಾಡಿ ಜಾರಿ ಮಾಡಬೇಕು.ನಿವೃತ್ತರಾದವರಿಗೆ ಇಡಿಗಂಟು ಹೆಚ್ಚಳ ಮಾಡಬೇಕು ಹಾಗೂ ಮಾಸಿಕ 10 ಸಾವಿರ ಪಿಂಚಣಿ ನೀಡಬೇಕು. ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಬೇಕು ಎಂದರು.
ಮುಖಂಡರಾದ ಕೆ. ನಗರತ್ನಮ್ಮ, ಶಕುಂತಲಾ, ಸ್ವಪ್ನ, ಅಮೃತ, ಸುನೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಸಕರ ಪರವಾಗಿ ಅವರ ಪುತ್ರ ಎಚ್.ಜಿ. ಗುರುದತ್ ಮನವಿ ಸ್ವೀಕರಿಸಿದರು.
ಹೊಸಪೇಟೆಯಲ್ಲಿ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ಶಾಸಕ ಎಚ್.ಆರ್. ಗವಿಯಪ್ಪ ಅವರ ನಿವಾಸದ ಎದುರು ಶನಿವಾರ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.