ಮಾರುತಿ ಶಿಡ್ಲಾಪೂರ
ಪಟ್ಟಣಕ್ಕೆ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆ ಹಿನ್ನೀರಿನ ಬಯಲಿನಿಂದ ಅಚಗೇರಿ ಕೆರೆವರೆಗೆ ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ₹೫ ಕೋಟಿ ವೆಚ್ಚದಲ್ಲಿ ನಡೆದಿರುವ ಕಾಮಗಾರಿಯಲ್ಲಿ ಕಾಲುವೆಗಳನ್ನು ಎತ್ತರಿಸುವುದು ಹಾಗೂ ಮನೆಗಳ ಹಿಂಭಾಗದ ಕಾಲುವೆಗಳಿಗೆ ಸ್ಲ್ಯಾಬ್ ಅಳವಡಿಸುವ ಅಗತ್ಯವಿದ್ದು, ಯೋಜನೆ ಪರಿಷ್ಕರಿಸಲು ಆಗ್ರಹ ಕೇಳಿಬಂದಿದೆ.
ಆನಿಕೆರೆ ೪೮.೨೮ ಹೆಕ್ಟೇರ್ ವಿಸ್ತೀರ್ಣವಿದ್ದು, ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ೪೩.೨೨ ಮೆಟ್ರಿಕ್ ಕ್ಯೂಬಿಕ್ ಫೀಟ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಆನಿಕೆರೆಯ ಹಿನ್ನೀರಿಗೆ ಮಳೆಗಾಲದಲ್ಲಿ ಪಟ್ಟಣದ ವಿವಿಧ ಪ್ರದೇಶದ ಕೊಳಚೆ ನೀರು ಸೇರುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯಡಿ ₹೫ ಕೋಟಿ ವೆಚ್ಚದಲ್ಲಿ ಆನಿಕೆರೆ ಹಿನ್ನೀರು ಬಯಲಿನಿಂದ ಅಚಕೆರೆ ವರೆಗೆ ೨.೬ ಕಿಮೀ ಕಾಂಕ್ರಿಟ್ ಕಾಲುವೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ.ಆನಿಕೆರೆ ಹಿನ್ನೀರಿನ ಪ್ರದೇಶದಲ್ಲಿ ಕಾಲುವೆಯ ಎತ್ತರ ೫ ಅಡಿ ಎನ್ನಲಾಗಿದೆ. ಆದರೆ ಭಾರೀ ಮಳೆ ಸಂದರ್ಭದಲ್ಲಿ ಆನಿಕೆರೆಯ ಹಿನ್ನೀರು ಈ ಕಾಂಕ್ರಿಟ್ ಕಾಲುವೆಯ ಎತ್ತರಕ್ಕಿಂತ ಹೆಚ್ಚು ಎತ್ತರಕ್ಕೆ ಬಂದು ನಿಲ್ಲುವ ಸಂದರ್ಭಗಳಿವೆ. ಈ ಕಾರಣಕ್ಕಾಗಿ ಇದೇ ಪಟ್ಟಣದಿಂದ ಬರುವ ಕೊಳಚೆ ನೀರು ಮತ್ತೆ ಆನಿಕೆರೆ ಸೇರುವುದೆಂಬ ಆತಂಕವಿದೆ.
ಕಾಲುವೆಯ ಒಂದು ಗೋಡೆ ಇನ್ನೆರಡು ಅಡಿ ಎತ್ತರಿಸಿದರೆ ಮಾತ್ರ ಇದು ಶಾಶ್ವತ ಪರಿಹಾರವಾಗಬಲ್ಲದು. ಈಗ ಯೋಜನೆ ಪರಿಷ್ಕರಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಈ ಕಾಮಗಾರಿ ಸರ್ವೇ ಸಂದರ್ಭದಲ್ಲಿಯೇ ಈ ಕಾಂಕ್ರಿಟ್ ಕಾಲುವೆ ಎತ್ತರದ ಬಗೆಗೆ ಇಲ್ಲಿನ ರೈತರು ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದಿದ್ದೆವು. ಅಧಿಕಾರಿಗಳು ಹೇಳುವುದಕ್ಕೂ ವಾಸ್ತವಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಆದ್ದರಿಂದ ಈ ಕಾಲುವೆಯ ಎತ್ತರವನ್ನು ಈಗಿರುವ ೫ ಅಡಿಗಿಂತ ಆರೇಳು ಅಡಿವರೆಗೆ ವಿಸ್ತರಿಸಬೇಕು. ಅಂದಾಗ ಮಾತ್ರ ಇದು ಪೂರ್ಣ ಪ್ರಮಾಣದ ಕೊಳಚೆ ಮುಕ್ತ ಆಗಲು ಸಾಧ್ಯ ಎಂದು ಹಾನಗಲ್ಲ ನಾಗರಿಕ ಸುನೀಲ ಬಂಕನಾಳ ಹೇಳಿದರು.