ಕನ್ನಡಪ್ರಭ ವಾರ್ತೆ ಆಲೂರುಪಟ್ಟಣದ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸೇವಾ ಸಮಿತಿ ಆಲೂರು ಇವರ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದ ಜರುಗಿತು.ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಶ್ರೀ ಬಸವೇಶ್ವರ ಶಾಲಾ ಆವರಣದವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವವು ಜರುಗಿತು. ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಸಾಗಿದರು. ವೀರಗಾಸೆ ನೃತ್ಯ ಹಾಗೂ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯ ಮಕ್ಕಳಿಂದ ಜಗದ್ಗುರು ರೇಣುಕಾಚಾರ್ಯ ಜೀವನಾಧಾರಿತ ನಾಟಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮ ಎಂದ ಅವರು ವೀರಶೈವ ಸಂಸ್ಕೃತ ಪದ ಲಿಂಗಾಯಿತ, ಲಿಂಗವಂತ ಎಂಬೆಲ್ಲ ಪರ್ಯಾಯ ನಾಮಗಳಿವೆ. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ.ವೀರಶೈವ ಧರ್ಮ ವೃಕ್ಷದ ತಾಯ್ಬೇರಿನಂತಿರುವ ರೇಣುಕಾಚಾರ್ಯರು ಸಕಲ ಜೀವಾತ್ಮರ ಅಭ್ಯುದಯಕ್ಕೆ ದುಡಿದವರು. ಭಾರತೀಯ ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆಯಿತ್ತ ಕಾರುಣಿಕರು. ವೀರಶೈವ ಧರ್ಮೀಯರು ಸರ್ವ ಸಮರ್ಥರಾಗಿದ್ದರೂ ಜಾತೀಯತೆಯ ಸಂಕೋಲೆಯಿಂದ ಸಂಕಷ್ಟವನ್ನು ಎದುರಿಸುವಂತಾಗಿದೆ. ವೀರಶೈವ ಧರ್ಮದ ಕುರಿತಾಗಿ ಪ್ರಕಟಗೊಳ್ಳುವ ಕೃತಿಗಳು ಹೆಚ್ಚು ಹೆಚ್ಚಾಗಿ ಪ್ರತಿಯೊಬ್ಬರ ಮನೆ ಸೇರಬೇಕು ಎಂದು ಹೇಳಿದರು.ಸಂಕಲಾಪುರಮಠದ ಉತ್ತರಾಧಿಕಾರಿಗಳಾದ ಶ್ರೀ ಶಾಂತವೀರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಭಾರತ ದೇಶದಲ್ಲಿರುವಷ್ಟು ಧರ್ಮಗಳು ಮತ್ತು ಆಚಾರ್ಯ ಶ್ರೇಷ್ಠರು ಬೇರಾವ ದೇಶಗಳಲ್ಲಿಯೂ ಇಲ್ಲ. ಅವರೆಲ್ಲರೂ ಇರುವುದರಿಂದಲೇ ಈ ನಾಡಿನಲ್ಲಿ ಶಾಂತಿ ಸಾಮರಸ್ಯ ಸದ್ಭಾವನೆಗಳು ಉಳಿದು ಬಂದಿವೆ. ಶಾಸಕ ಸಿಮೆಂಟ್ ಮಂಜು ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಸಾಧನೆ ಬೋಧನೆ ಮತ್ತು ಮಾರ್ಗದರ್ಶನ ನಮ್ಮೆಲ್ಲರ ಬಾಳಿಗೆ ದಾರಿ ದೀಪವಾಗಿದೆ, ಬಾಳೆಹೊನ್ನೂರು ರಂಭಾಪುರಿ ಪೀಠ ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಜಾತಿ, ಧರ್ಮಗಳ ಸಂಘರ್ಷಮಯ ಇಂದಿನ ದಿನಗಳಲ್ಲಿ ರಂಭಾಪುರಿ ಪೀಠದ ಸಂದೇಶ ನಮ್ಮೆಲ್ಲರಲ್ಲಿ ಶಾಂತಿ ಸೌಹಾರ್ದತೆ ಮೂಡಿ ಬರಲು ಕಾರಣವಾಗಿರುತ್ತದೆ ಎಂದು ತಿಳಿಸಿದರು.