ಕನ್ನಡಪ್ರಭ ವಾರ್ತೆ ಅರಸೀಕೆರೆ

ಅವಾರ್ಡ್ ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳಿದ್ದ ಅರಸೀಕೆರೆಯ ಕೆವಿಎನ್ ಶಿವು ಸೇರಿದಂತೆ 28 ಮಂದಿ ಪ್ರತಿನಿಧಿಗಳು ಯುದ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾರ್ಯಕ್ರಮ ನಡೆಯುತಿದ್ದ ಸ್ಥಳದ ಸಮೀಪ ಸಂಭವಿಸಿದ ಶೆಲ್‌ ದಾಳಿ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ಭಾಗವಹಿಸಿದ್ದವರು ತಾತ್ಕಾಲಿಕವಾಗಿ ದುಬೈನಲ್ಲೇ ಉಳಿಯಬೇಕಾದ ಸ್ಥಿತಿ ಉಂಟಾಗಿದೆ.

ದುಬೈ ನಗರದ ಮಿಲೇನಿಯಂ ಹೋಟೆಲ್ ಡೌನ್‌ಟೌನ್ ಸಮೀಪ ಶೆಲ್‌ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕೆಲವೇ ದೂರದಲ್ಲಿ ಈ ಘಟನೆ ಸಂಭವಿಸಿದ್ದರಿಂದ ಭದ್ರತಾ ಕಾರಣಗಳಿಂದ ಎಲ್ಲಾ ಸೈಟ್ ವಿಸಿಟ್‌ಗಳು ಮತ್ತು ಕಾರ್ಯಕ್ರಮಗಳನ್ನು ತಕ್ಷಣವೇ ರದ್ದುಗೊಳಿಸಲಾಯಿತು. ಏಪೋರ್ಟ್ ಪ್ರದೇಶದಲ್ಲಿಯೂ ಭದ್ರತಾ ಎಚ್ಚರಿಕೆ ಜಾರಿಗೊಂಡ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ.

ಈ ಅವಾರ್ಡ್‌ ಕಾರ್ಯಕ್ರಮಕ್ಕೆ ಒಟ್ಟು 28 ಮಂದಿ ಕರ್ನಾಟಕದಿಂದ ತೆರಳಿದ್ದರು. ಸದ್ಯದ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ, ಹೊರಗಡೆ ಪರಿಸ್ಥಿತಿ ಯಾವಾಗ ಹೇಗೆ ಬದಲಾಗಬಹುದು ಎಂಬ ಆತಂಕದಿಂದ ಎಲ್ಲರೂ ಹೋಟೆಲ್ ವಸತಿಗೃಹಗಳಲ್ಲಿ ಸುರಕ್ಷಿತವಾಗಿ ತಂಗಿದ್ದಾರೆ.

ಭದ್ರತಾ ಕಾರಣಗಳಿಂದ ಎರಡು ದಿನಗಳ ಮಟ್ಟಿಗೆ ವಿಮಾನ ಸಂಚಾರ ರದ್ದುಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಮುಂದಿನ ಸೂಚನೆಗಾಗಿ ಕಾಯುತ್ತಿದ್ದಾರೆ. ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್‌ ಅವರಿಂದ ಈ ಕುರಿತು ಯಾವುದೇ ಮಾರ್ಗಸೂಚಿ ಅಥವಾ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇರುವುದಾಗಿ ನಿರೀಕ್ಷಿಸಲಾಗಿದೆ.


ಘಟನೆ ಕುರಿತು ಅವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, “ಸದ್ಯಕ್ಕೆ ನಾವು ಎಲ್ಲರೂ ಸುರಕ್ಷಿತರಾಗಿದ್ದೇವೆ. ಪರಿಸ್ಥಿತಿ ಶಾಂತವಾಗಿದ್ದರೂ ವಿಮಾನ ಸಂಚಾರ ಪುನರಾರಂಭವಾಗುವವರೆಗೆ ಕಾಯಬೇಕಾಗಿದೆ” ಎಂದು ತಿಳಿಸಿದ್ದಾರೆ.----

* ಬಾ್ಕ್ಸ್‌ನ್ಯೂಸ್‌::: ಅಂಗಡಿಹಳ್ಳಿಯ ಐವರು

ಶೆಲ್‌ ದಾಳಿ ನಡೆದಿರುವ ದ್ವೀಪ ರಾಷ್ಟ್ರ ಬೆಹೆರೇನ್‌ನಲ್ಲಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಂಗಡಿಹಳ್ಳಿಯ ಐವರು ಸಿಲುಕಿದ್ದಾರೆ. ಬೆಹೆರೇನ್‌ ರಾಜಧಾನಿ ಮನಾಮಾದಲ್ಲಿ ಅಂಗಡಿಹಳ್ಳಿಯ ಪಂಜು, ಜಮುನಾ, ಸುರೇಂದ್ರ, ಪ್ರಸಾದ್‌, ರತೀಶ್‌ ಸಿಲುಕಿದ್ದಾರೆ.

ವಿಶೇಷವಾಗಿ ಅಂಗಡಿಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದವರೇ ಹೆಚ್ಚಿದ್ದು, ಇವರು ಕಾಡಿನ ಉತ್ಪನ್ನಗಳು, ಕೇಶ ವರ್ಧಿತ ತೈಲ, ಅಂಗಾಂಗಗಳ ನೋವನ್ನು ಕಡಿಮೆ ಮಾಡುವ ತೈಲಗಳನ್ನು ಬಳಸಿ ಮಸಾಜ್‌ ಮಾಡುವ ವೃತ್ತಿಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಹಾಗಾಗಿ ಇವರು ಕಾಡಿನ ಉತ್ಪನ್ನಗಳು, ಗಿಡಮೂಲಿಕೆಗಳನ್ನು ಮಾರಾಟ ಮಾಡುವುದೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಹಲವು ರಾಷ್ಟ್ರಗಳಿಗೆ ಆಗಾಗ ಹೋಗಿಬರುತ್ತಿರುತ್ತಾರೆ. ಇದೇ ಕಾರಣಕ್ಕಾಗಿ ಅಂಗಡಿಹಳ್ಳಿಯಲ್ಲಿರುವ ಹಕ್ಕಿಪಿಕ್ಕಿ ಜನಾಂಗದ ಸಾಕಷ್ಟು ಜನರ ಬಳಿ ಪಾಸ್‌ಪೋರ್ಟ್‌ಗಳಿವೆ.