ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವಿಜ್ಞಾನವು ದಿನನಿತ್ಯದ ಬದುಕಿನಲ್ಲಿ, ಶಿಕ್ಷಣ, ಕೃಷಿ, ವೈದ್ಯಕೀಯ ಮತ್ತು ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಬಳಕೆಯಾಗುತ್ತದೆ ಎಂದು ಸ್ಮಾರ್ಟ್‌ ಪಬ್ಲಿಕ್ ಶಾಲೆ ಕಾರ್ಯದರ್ಶಿ ಶಿವಾನಂದ ಸ್ವಾಮಿ ಹೇಳಿದರು.

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸ್ಮಾರ್ಟ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದೂರದರ್ಶಕ (ಟೆಲಿಸ್ಕೋಪ್‌) ಶೋ ಆಯೋಜಿಸಲಾಯಿತು. ಶಾಲೆಯ ಆವರಣದಲ್ಲಿ ಟೆಲಿಸ್ಕೋಪ್ ಮೂಲಕ ವಿದ್ಯಾರ್ಥಿಗಳಿಗೆ ಚಂದ್ರನ ಮೇಲ್ಮೈ ಭಾಗವನ್ನು ತೋರಿಸಲಾಯಿತು. ಮುಖ್ಯ ನಕ್ಷತ್ರ ಪುಂಜಗಳು ಹಾಗೂ ಆಕಾಶದಲ್ಲಿನ ಪ್ರಕಾಶಮಾನ, ನಕ್ಷತ್ರಗಳನ್ನು ವೀಕ್ಷಿಸಲು ಅವಕಾಶ ನೀಡಲಾಯಿತು. ಗ್ರಹಗಳು ಹಾಗೂ ಆಕಾಶ ವಸ್ತುಗಳ ಬಗ್ಗೆ ಶಿಕ್ಷಕರು ವಿವರಣೆ ನೀಡಿದರು. ವಿದ್ಯಾರ್ಥಿಗಳು ಆಕಾಶ ವೀಕ್ಷಣೆ ಮೂಲಕ ಹೊಸ ಅನುಭವವನ್ನು ಪಡೆದರು.ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಖಗೋಳ ಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ ಯಶಸ್ವಿಯಾಗಿ ಮುಕ್ತಾಯವಾಯಿತು. ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಕುರಿತು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಿಪಿಟಿ ಮೂಲಕ ವಿಜ್ಞಾನಿಗಳ ಸಾಧನೆಗಳು ಮತ್ತು ವಿವಿಧ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದರು. ವಿಜ್ಞಾನ ಕುರಿತ ರಸಪ್ರಶ್ನೆ ಸ್ಪರ್ಧೆಯೂ ನಡೆಯಿತು. ಕಾರ್ಯಕ್ರಮದಲ್ಲಿ ರಾಜೇಶ್, ಉಪಾಧ್ಯಕ್ಷ ಶ್ರೀಕಾಂತ್‌, ಮಹೇಶ್ಚಂದ್ರ, ಪ್ರವೀಣ್, ಪ್ರಾಂಶುಪಾಲ ಶ್ವೇತ ಎಸ್‌. ಗೌಡ ಹಾಗೂ ಉಪ ಪ್ರಾಂಶುಪಾಲ ಸಂತೋಷ್ ಕುಮಾರ್‌ ಇದ್ದರು.