ಕೈ ಹಿಡಿದ ಮೀನುಗಾರಿಕೆಯಲ್ಲಿ ವಾರ್ಷಿಕ 6 ಲಕ್ಷ ಗಳಿಕೆ; ರೈತ ಬಸವೇಗೌಡರ ಸಾಧನೆ

KannadaprabhaNewsNetwork |  
Published : May 30, 2025, 12:34 AM IST
1 | Kannada Prabha

ಸಾರಾಂಶ

'ನಾವು ಚಿಕ್ಕವರಿದ್ದಾಗ ಕಬ್ಬು ಬೆಳೆಯುತ್ತಿದ್ದವು. ಎತ್ತಿನಗಾಣದಲ್ಲಿ ಬೆಲ್ಲ ತಯಾರಿಸುತ್ತಿದ್ದವು. ಆಗ ಸ್ಕೂಲಿಗೆ ಹೋಗುವ ಮುನ್ನ ಕೃಷಿ ಕೆಲಸ ಮಾಡಿ ಹೋಗುತ್ತಿದ್ದೆವು' ಎನ್ನುತ್ತಾರೆ ಬಸವೇಗೌಡ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಟಿ. ನರಸೀಪುರ ತಾಲೂಕು ಬೀಡನಹಳ್ಳಿಯ ಬಸವೇಗೌಡರು ಕಳೆದ 27 ವರ್ಷಗಳಿಂದಲೂ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ವಾರ್ಷಿಕ 6 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಇವರಿಗೆ ಒಂದೂವರೆ ಎಕರೆ ಜಮೀನಿದೆ. ಒಂದು ಕೊಳವೆ ಬಾವಿ ಕೊರೆಸಿದ್ದಾರೆ. ಇದಲ್ಲದೇ ಸಿಡಿಎಸ್‌ ಹಾಗೂ ವಿಸಿ ನಾಲೆಯಿಂದ ನೀರಾವರಿ ಸೌಲಭ್ಯವೂ ಉಂಟು.

ಅರ್ಧ ಎಕರೆಯಲ್ಲಿ ಭತ್ತ, ಅರ್ಧ ಎಕರೆಯಲ್ಲಿ 400 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ಭತ್ತ ಮನೆ ಬಳಕೆಗೆ ಆಗಿ ಉಳಿದರೆ ಮಾತ್ರ ಮಾರಾಟ. ಅಡಿಕೆ ಈಗ ಫಲ ಬರುತ್ತಿದೆ. ಕುರಿಗಳು-3, ನಾಟಿ ಕೋಳಿಗಳು-4 ಇವೆ. ಹೀಗಾಗಿ ಮೀನು ಕೃಷಿಯೇ ಇವರ ಪ್ರಧಾನ ಕಸುಬಾಗಿದೆ. ಇವರ ಬಳಿ 10-12 ಮಂದಿ ಕೆಲಸ ಮಾಡುತ್ತಿದ್ದಾರೆ.

.ಬಸವೇಗೌಡರು ತಮ್ಮ ಜಮೀನಿನಲ್ಲಿ ಮೀನುಮರಿ ಪಾಲನಾ ಕೇಂದ್ರ ನಿರ್ಮಿಸಿದ್ದಾರೆ. ಮೀನುಗಾರಿಕೆ ಇಲಾಖೆಯ ಎನ್‌ಎಂಪಿಎಸ್‌ ಯೋಜನೆಯಡಿ ಸಹಾಯಧನ ಪಡೆದು ಮೀನುಮರಿ ಪಾಲನೆ ಮಾಡುತ್ತಿದ್ದರು. ಇದರಿಂದ ವಾರ್ಷಿಕ 3 ಲಕ್ಷ ರು. ಆದಾಯ ಬರುತ್ತಿತ್ತು. ಇದಲ್ಲದೇ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಯೋ ಫ್ಲಾಕ್‌ ಕೊಳ ನಿರ್ಮಾಣಕ್ಕೆ 8.40 ಲಕ್ಷ ರು. ಸಹಾಯಧನ ಪಡೆದು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮೀನು ಕೃಷಿ ಮಾಡುತ್ತಿದ್ದಾರೆ.

ಮೀನುಗಾರಿಕೆ ಇಲಾಖೆಯಿಂದ ಹನುಮನಾಳು ಕೆರೆಯನ್ನು ಐದು ವರ್ಷಕ್ಕೆ ಗುತ್ತಿಗೆ ಪಡೆದಿದ್ದಾರೆ. ಇದರಿಂದ ವಾರ್ಷಿಕ 6 ಲಕ್ಷ ರು. ಆದಾಯ ಬರುತ್ತಿದೆ.

ಮೀನುಗಾರಿಕೆ ಕ್ಷೇತ್ರದ ಸಾಧನೆಗಾಗಿ 2023ರ ರೈತ ದಸರಾದಲ್ಲಿ ಬಸವೇಗೌಡ ಅವರನ್ನು ಸನ್ಮಾನಿಸಲಾಗಿದೆ. ಇತ್ತೀಚೆಗೆ ಮುರಡೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸನ್ಮಾನಿಸಿದ್ದಾರೆ. ಬೀಡನಹಳ್ಳಿಯಲ್ಲಿ ಮೀನುಗಾರಿಕೆ ಸಹಕಾರ ಸಂಘ ಸ್ಥಾಪಿಸಿಕೊಂಡಿದ್ದು,. ಇವರೇ ಅಧ್ಯಕ್ಷರಾಗಿದ್ದಾರೆ. 125 ಸದಸ್ಯರಿದ್ದು, ಎಲ್ಲರಿಗೂ ಡಿವಿಡೆಂಡ್‌ ನೀಡಲಾಗಿದೆ. ಸಂಘ ಇಷ್ಟೊಂದು ಚೆನ್ನಾಗಿ ನಡೆಯುತ್ತಿರುವುದರಿಂದ ಅವರಿಗೆ ಸನ್ಮಾನ ಸಂದಿದ.

ಮೀನು ಕೃಷಿಯಲ್ಲಿ ಸಾಮಾನ್ಯ ವರ್ಗ, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡ- ಹೀಗೆ ಯಾರು ಬೇಕಾದರೂ ತೊಡಗಿಸಿಕೊಳ್ಳಬಹುದು. ಪ್ರಧಾನಮಂತ್ರಿಗಳ ಮತ್ಸ್ಯಸಂವರ್ಧನ ಯೋಜನೆಯಲ್ಲಿ ಸಾಮಾನ್ಯ ವರ್ಗದವರಿಗೆ ಶೇ.40, ಮಹಿಳೆಯರು , ಪ.ಜಾತಿ ಮತ್ತು ಪಂಗಡದವರಿಗೆ ಶೇ.60 ರಷ್ಟು ಸಹಾಯದನ ಇರುತ್ತದೆ.ಗಿಫ್ಟ್‌ ತಿಲಾಪಿಯಾ ಮೀನುಮರಿ ಬೆಳೆಸಬೇಕು. ಮೀನುಮರಿಗಳಿಗೆ ಮೂರ್ನಾಲ್ಕು ತಿಂಗಳು ಕ್ಯಾಲ್ಸಿಯಂ ಆಹಾರ ನೀಡಬೇಕು. ಸಗಟುಗಿಂತ ಚಿಲ್ಲರೆ ಮಾರಾಟ ಮಾಡಿದರೆ ಹೆಚ್ಚು ಆದಾಯ ಕಾಣಬಹುದು.

ಮೀನು ಕೃಷಿಯ ಬಗ್ಗೆ ಆಸಕ್ತಿ ಬಂದಿದ್ದು ಹೇಗೆ?:

ಬಸವೇಗೌಡರು ಬೀಡನಹಳ್ಳಿ, ಅತ್ತಹಳ್ಳಿ, ಬನ್ನೂರಿನಲ್ಲಿ ಓದಿದ್ದಾರೆ. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

''''ನಾವು ಚಿಕ್ಕವರಿದ್ದಾಗ ಕಬ್ಬು ಬೆಳೆಯುತ್ತಿದ್ದವು. ಎತ್ತಿನಗಾಣದಲ್ಲಿ ಬೆಲ್ಲ ತಯಾರಿಸುತ್ತಿದ್ದವು. ಆಗ ಸ್ಕೂಲಿಗೆ ಹೋಗುವ ಮುನ್ನ ಕೃಷಿ ಕೆಲಸ ಮಾಡಿ ಹೋಗುತ್ತಿದ್ದೆವು'''' ಎನ್ನುತ್ತಾರೆ ಬಸವೇಗೌಡ.

ರೈತರ ಮಕ್ಕಳಿಗೆ ಕೆಆರ್‌ಎಸ್‌ ಜಲಾಶಯದಲ್ಲಿ ಪ್ರತಿ ವರ್ಷ ಮೂರು ತಿಂಗಳು ಮೀನುಗಾರಿಕೆ ತರಬೇತಿ ನೀಡುತ್ತಾರೆ. ನಾನು 2003-04 ರಲ್ಲಿ ಈ ತರಬೇತಿ ಪಡೆದು, ಬಿ.ಸೀಹಳ್ಳಿ- ಮಾರಗೌಡನಹಳ್ಳಿ ಕೆರೆಯ ಟೆಂಡರ್‌ ಪಡೆದೆ. ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಕೊಳ ನಿರ್ಮಿಸಿದೆ. ಮೀನುಗಾರಿಕೆ ಇಲಾಖೆಯ ಸಹಾಯಧನದಿಂದ ಸ್ಪಾನ್‌ ಮೀನುಮರಿ ಪಾಲನಾ ಕೇಂದ್ರ ಆರಂಭಿಸಿದೆ. ಜಲಾಶಯಗಳಿಗೆ ವರ್ಷಕ್ಕೆ ಇಂತಿಷ್ಟು ಮೀನುಮರಿಗಳನ್ನು ಬಿಡಬೇಕು ಎಂಬ ನಿಯಮ ಇದೆ.ಅದರಂತೆ ಕೆಆರ್‌ಎಸ್‌ ಜಲಾಶಯಕ್ಕೆ ಬಿಡಲು 2021-22 ರಲ್ಲಿ 2 ಲಕ್ಷ, 2023 ರಲ್ಲಿ 1 ಲಕ್ಷ ಮೀನುಮರಿಗಳನ್ನು ಮಾರಾಟ ಮಾಡಿದೆ.ಪ್ರತಿ ಮೀನಿಗೆ 1.10 ರು,ನಂತೆ ನನಗೆ ಒಳ್ಳೆಯ ಆದಾಯ ಬಂದಿತು.

ನಂತರ ಹನುಮನಾಳು ಕೆರೆಯನ್ನು ಐದು ವರ್ಷಕ್ಕೆ ಟೆಂಡರ್‌ ಪಡೆದಿದ್ದೇನೆ. ಬಯೋ ಫ್ಲಾಕ್‌ ಮಾಡಿದೆ. ಪ್ರತಿ ವರ್ಷ 87 ಸಾವಿರ ರು, ಶೇ.5 ರಷ್ಟು ಹಣವನ್ನು ಮೀನುಗಾರಿಕೆ ಇಲಾಖೆಗೆ ಪಾವತಿಸಬೇಕು. ಸರಿಯಾದ ಕಾವಲು, ಕೋಡಿ, ಮಳೆ ಹೆಚ್ಚಾದಾಗ ಮೀನುಗಳು ಮೇಲೆ ಹಾಗೂ ಕೆಳಕ್ಕೆ ಹೋಗದಂತೆ ಬಲೆ ಹಾಕಿದೆ. ಗಿಫ್ಟ್‌ ತಿಲಾಪಿಯಾ ಮೀನು ಪ್ರತಿ ಕೆಜಿಗೆ 90 ರು, ಕಾಟ್ಲಾ 120 ರು.ಗೆ ಮಾರಾಟ ಮಾಡಿದೆ. ಇದರಿಂದ ವಾರ್ಷಿಕ 6 ಲಕ್ಷ ರು. ಆದಾಯ ಬರುತ್ತಿದೆ ಎಂದು ಬಸವೇಗೌಡ ತಿಳಿಸಿದರು.

ಸಂಪರ್ಕ ವಿಳಾಸ:

ಬಸವೇಗೌಡ ಬಿನ್‌ ಲೇಟ್‌ ಬೆಟ್ಟೇಗೌಡ

ಬೀಡನಹಳ್ಳಿ, ಹನುಮನಾಳು

ಟಿ. ನರಸೀಪುರ ತಾಲೂಕು

ಮೈಸೂರು ಜಿಲ್ಲೆ

ಮೊ. 98801 26637

------‘ವ್ಯವಸ್ಥಿತವಾಗಿ ಕೃಷಿ ಮಾಡಿದರೆ ನಷ್ಟವಾಗಲ್ಲ. ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತದೆ. ಎಲ್ಲೊ ಇರುವುದಲ್ಲ. ಜಮೀನಿನಲ್ಲಿ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.’

ಬಸವೇಗೌಡ, ಬೀಡನಹಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ