ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಗೋಪಾಲಪುರ ಗ್ರಾಮದ ದೇವಾಂಗ ಸಂಘದ ವತಿಯಿಂದ ಕಳೆದ 26 ವರ್ಷಗಳಿಂದ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. 2 ದಿನಗಳ ವರೆಗೆ ವಾರ್ಷಿಕ ಪೂಜಾ ಮಹೋತ್ಸವವು ನಡೆಯುತ್ತದೆ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಶ್ರೀಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತಗಳ ಅಭಿಷೇಕದ ನಂತರ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆಯ ನಂತರ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಹೋಮ, ಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು.ತದನಂತರ ಪುಣ್ಯಾಹುತಿ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 4 ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಯಾತ್ರೆ ಮೆರವಣಿಗೆ ನಡೆಯಿತು
ಅರ್ಚಕರಾದ ಪ್ರಸನ್ನ ಭಟ್ ಮತ್ತು ನಾಗೇಶ್ ಭಟ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿದಿ ವಿಧಾನವನ್ನು ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.