ಕಾಲೇಜುಗಳಲ್ಲಿ ಡ್ರಗ್ಸ್‌ ವಿರೋಧಿ ಸಮಿತಿ ರಚನೆ: ಸುಧೀರ್‌ ರೆಡ್ಡಿ

KannadaprabhaNewsNetwork | Published : Jun 27, 2025 12:48 AM

ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಗರ ಪೊಲೀಸ್‌ ಇಲಾಖೆ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಎಜುಕೇಶನ್‌ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಘಟಕದ ಆಶ್ರಯದಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಡ್ರಗ್ಸ್‌ ವಿರುದ್ಧ ಜಾಗೃತಿ ಹಾಗೂ ನಿಗಾ ವಹಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಡ್ರಗ್ಸ್‌ ವಿರೋಧಿ ಸಮಿತಿಗಳನ್ನು ರಚಿಸಿ ನಿಗಾ ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.

ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಗರ ಪೊಲೀಸ್‌ ಇಲಾಖೆ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಪ್ರೊಫೆಶನಲ್‌ ಎಜುಕೇಶನ್‌ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಮಿತಿಯ ಮೂಲಕ ಡ್ರಗ್ಸ್‌ ಬಳಕೆಯ ಕುರಿತಂತೆ ತಪಾಸಣೆ ಮಾಡಿ, ಬಳಕೆ ಮಾಡುವವರನ್ನು ಸಂತ್ರಸ್ತರನ್ನಾಗಿ ಪರಿಗಣಿಸಿ ಅವರಿಗೆ ಅಗತ್ಯ ನೆರವು ಒದಗಿಸಬೇಕು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಬಗ್ಗೆ ಕಾಳಜಿ ವಹಿಸಿಕೊಂಡು ಅವರ ಜವಾಬ್ದಾರಿ ತಮ್ಮ ಹೊಣೆ ಎಂದು ಭಾವಿಸಿದಾಗ ಮಾದಕ ದ್ರವ್ಯ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಡ್ರಗ್ಸ್‌ ಚಟಕ್ಕೆ ತುತ್ತಾದವರ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಇಲಾಖೆಯಿಂದ ಕ್ಯೂಆರ್‌ ಕೋಡ್‌ ರೂಪಿಸಲಾಗಿದೆ. ಇದನ್ನು ಎಲ್ಲ ಕಾಲೇಜುಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಕ್ಯೂಆರ್‌ ಕೋಡ್‌ ಮೂಲಕ ಡ್ರಗ್ಸ್‌ ವ್ಯಸನಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದು ಎಂದರು. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಮಾತನಾಡಿ, ಕ್ಷಣಿಕ ಸುಖವನ್ನು ಬದಿಗಿಟ್ಟು ಮುಂದಿನ ಜೀವನಕ್ಕೆ ಬೇಕಾದ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಮನೆ, ಸ್ನೇಹಿತರಿಂದಲೇ ಈ ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು. ತಮ್ಮ ಸುತ್ತಮುತ್ತಲಲ್ಲಿ ಇಂತಹ ದುಶ್ಚಟಗಳಿಗೆ ಒಳಗಾದವರ ಬಗ್ಗೆ ಪೊಲೀಸ್‌ ಇಲಾಖೆಯ ಸಹಾಯವಾಣಿಗೆ ಗೌಪ್ಯವಾಗಿ ಮಾಹಿತಿ ನೀಡಬಹುದು. ಪೊಲೀಸರು ಮಾದಕ ವ್ಯಸನಕ್ಕೆ ತುತ್ತಾದವರನ್ನು ಬಂಧಿಸದೆ, ಅವರನ್ನು ಸಂತ್ರಸ್ತರೆಂದು ಪರಿಗಣಿಸಿ ಅದರಿಂದ ಹೊರಬರುವ ನಿಟ್ಟಿನಲ್ಲಿ ಸಹಕಾರ ನೀಡಲಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ವಿವಿ ಉಪಕುಲಪತಿ ಪ್ರೊ. ಡಾ. ಎಂ.ಎಸ್‌. ಮೂಡಿತ್ತಾಯ, ಜಗತ್ತಿನ ಅತೀ ದೊಡ್ಡ ಯುವಶಕ್ತಿಯನ್ನು ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಭಾರತದಲ್ಲಿ ಮುಖ್ಯವಾಗಿ ಯುವ ಪೀಳಿಗೆ ದುಶ್ಚಟಗಳಿಂದ ದೂರ ಇರಬೇಕಾಗಿದೆ. ಈ ದೇಶದ ರಾಯಭಾರಿಗಳಾಗಿರುವ ಯುವ ಜನತೆ ದುಶ್ಚಟಗಳಿಗೆ ತೊಡಗಿಕೊಳ್ಳುವವರಿಗೆ ಮಾರ್ಗದರ್ಶಕರಾಗಿಬೇಕು ಎಂದು ಸಲಹೆ ನೀಡಿದರು.ಚಲನಚಿತ್ರ ನಟ ರೂಪೇಶ್‌ ಶೆಟ್ಟಿ ಮಾತನಾಡಿ, ಡ್ರಗ್ಸ್‌ನಂತಹ ಮಾದಕ ವ್ಯಸನಗಳ ಬಗ್ಗೆ ಅರ್ಥ ಮಾಡಿಕೊಳ್ಳದಿದ್ದರೆ ಜೀವನವೇ ಬೋರ್‌ ಆಗುತ್ತದೆ. ಜೀವನಕ್ಕೆ ನಶೆ ಬೇಕು, ಆದರೆ ಅದು ಸಾಧನೆಯ ನಶೆಯಾಗಿರಬೇಕು. ಪೋಷಕರು ಸಂತಸ ಪಡುವ ನಶೆ ಬೇಕು ಎಂದು ಹೇಳಿದರು.ಪ್ರಾಸ್ತಾವಿಕ ಮಾತನಾಡಿದ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಾ. ಅರುಣ್‌ ಕುಮಾರ್‌, ಡ್ರಗ್ಸ್‌ ಚಟ ನಮ್ಮ ಚಿಂತನಾ ಸಾಮರ್ಥ್ಯ ಕುಗ್ಗಿಸಿ ಭಾವನಾರಹಿತ ಪ್ರಾಣಿಗಳನ್ನಾಗಿಸುತ್ತವೆ. ಸಾರ್ವಜನಿಕರಿಂದಲೂ ಈ ನಿಟ್ಟಿನಲ್ಲಿ ಪೊಲೀಸರಿಗೆ ಸಹಕಾರ ದೊರೆಯಬೇಕು ಎಂದು ಹೇಳಿದರು.ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್‌, ಕೆ. ರವಿಶಂಕರ್‌, ಉಮೇಶ್‌ ಪಿ. ಇದ್ದರು.

ಎಸಿಪಿ ನಜ್ಮಾ ಫಾರೂಕಿ ಸ್ವಾತಿಸಿದರು. ಪವಿತ್ರ ಮಲ್ಯ ಪ್ರಾರ್ಥಿಸಿದರು. ಎಸಿಪಿ ಗೀತಾ ಕುಲಕರ್ಣಿ ವಂದಿಸಿದರು.ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಅವರು ಡ್ರಗ್ಸ್‌ ವಿರೋಧಿ ಪ್ರಮಾಣಪತ್ರ ಬೋಧಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಪುರಭವನದಿಂದ ಕ್ಲಾಕ್‌ಟವರ್‌ ವರೆಗೆ ವಿದ್ಯಾರ್ಥಿಗಳಿಂದ ನಡಿಗೆ ನಡೆಯಿತು.

........................

ಚಿಂತನೆ ಇಲ್ಲದ ಸಮಯದಲ್ಲಿ ನಾವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಮ್ಮ ಜತೆ ನಮ್ಮ ಕುಟುಂಬವನ್ನೂ ಜೀವನಪೂರ್ತಿ ತಲೆತಗ್ಗಿಸುವಂತೆ ಮಾಡುತ್ತದೆ. ಅದಕ್ಕೆ ನಾವು ಅವಕಾಶ ನೀಡಬಾರದು. ಮಾದಕ ದ್ರವ್ಯದ ವ್ಯಸನವೆಂಬ ಅಪರಾಧದಲ್ಲಿ ಸಂತ್ರಸ್ತರಾಗುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದ್ದು, ಮಹಿಳೆಯರಿಗಾಗಿ ಡಿಎಡಿಕ್ಷನ್‌ ಸೆಂಟರ್‌ಗಳ ಅಗತ್ಯವಿದೆ.

-ಬೀನಾ, ಮಾದಕ ವ್ಯಸನ ಮುಕ್ತ ಸಂತ್ರಸ್ತೆ