ಕರಡಿಧಾಮ ಅರಣ್ಯ ಪ್ರದೇಶದಲ್ಲಿ ಆರೋಪಿಗಳ ವಶ । ನ್ಯಾಯಾಂಗ ಬಂಧನ
ಕನ್ನಡಪ್ರಭ ವಾರ್ತೆ ಅರಸೀಕೆರೆತಾಲೂಕಿನ ಕಸಬಾ ಹೋಬಳಿಯ ಹಿರೇಕಲ್ ಗುಡ್ಡದ ವ್ಯಾಪ್ತಿ ಕರಡಿಧಾಮ ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ಲಕ್ಷಾಂತರ ರು. ಮೌಲ್ಯದ ಔಷಧಿ ಗುಣವುಳ್ಳ ಮಾಕಳಿ ಬೇರು ಕಳವು ಮಾಡುತ್ತಿದ್ದ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ನಾಗಪುರಿ ಹಾಗೂ ಹಿರೇಕಲ್ ಗುಡ್ಡ ಪ್ರದೇಶವು ಅಮೂಲ್ಯ ಸಸ್ಯ ಸಂಪತ್ತಿನಿಂದ ಕೂಡಿದೆ. ಇಲ್ಲಿ ಅನೇಕ ಔಷಧಿ ಸಸ್ಯಗಳಿವೆ. ಚಿರತೆ ಮತ್ತು ಕರಡಿ, ಚಿಂಕೆಗಳು ಸೇರಿದಂತೆ ಅನೇಕ ವನ್ಯಜೀವಿಗಳಿರುವ ಕಾರಣ ಸರ್ಕಾರ ಕರಡಿಧಾಮ ಅರಣ್ಯ ಪ್ರದೇಶವೆಂದು ಘೋಷಿಸಿದೆ. ಅರಣ್ಯದ ಸಸ್ಯ ಸಂಪತ್ತು, ವನ್ಯಜೀವಿ ಸಂಪತ್ತನ್ನು ರಕ್ಷಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಇನ್ನೂ ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ. ಇಂಥ ಅಮೂಲ್ಯ ಸಸ್ಯ ಸಂಪತ್ತಿನ ಬಗ್ಗೆ ಮಾಹಿತಿಯಿರುವ ಕರಡಿ ಧಾಮ ಅರಣ್ಯ ಪ್ರದೇಶವನ್ನು ಆಕ್ರಮವಾಗಿ ಪ್ರವೇಶಿಸಿ ಅಮೂಲ್ಯ ಗಿಡಮೂಲಿಕೆಗಳನ್ನು ಕದ್ದು ರವಾನಿಸುತ್ತಿದ್ದ ಮೂವರನ್ನು ಮಾಲು ಸಮೇತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ತಮಿಳುನಾಡಿನ ಖದೀಮರು ಹಲವು ವರ್ಷಗಳಿಂದ ದಾಳಿ ನಡೆಸಿ ಮೂಲಿಕೆಗಳನ್ನು ರವಾನಿಸುತ್ತಿದ್ದಾರೆ ಎನ್ನಲಾಗಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಮಿಲಿತಿಕ್ಕಿ ಗ್ರಾಮದ ನಂಜಪ್ಪ (55), ಮದ್ದೂರ (27) ಹಾಗೂ ತಗ್ಗಟ್ಟಿ ಗ್ರಾಮದ ಕುಲ್ಲಪ್ಪನ್ (58) ಎಂಬ ಖದೀಮರು ಸುಮಾರು 1.5 ಲಕ್ಷ ರೂ.ಬೆಲೆ ಬಾಳುವ ಮಾಕಳಿ ಬೇರುಗಳನ್ನು ಕಿತ್ತುಕೊಂಡು ಚೀಲದಲ್ಲಿ ಸಾಗಿಸುತ್ತಿದ್ದ ವೇಳೆ ವಲಯ ಅರಣ್ಯಾಧಿಕಾರಿ ಕೆ.ಎನ್.ಹೇಮಂತ್ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಟಿ.ದಿಲೀಪ್, ಉಮೇಶ್, ದಿಲೀಪ್ ಕುಮಾರ್ ಇತರರಿದ್ದರು.