ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗುರುವಾರ ಮಧ್ಯಾಹ್ನ 2.15 ರ ವೇಳೆಗೆ ರೈಲಿನ ಮೂಲಕ ಆಗಮಿಸಿದ ಸಚಿವರನ್ನು ಪ್ರತ್ಯೇಕವಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹೂ ಗುಚ್ಚ ನೀಡಿ ಸ್ವಾಗತಿಸಲು ನಿಂತಿದ್ದರು.
ಆದರೆ, ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಅಲ್ಲೇ ನಿಂತಿದ್ದು ಮಾಜಿ ಶಾಸಕರಾದ ನಾಗಮಂಗಲ ಸುರೇಶ್ ಗೌಡ, ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ ಹಾಗೂ ಹಾಲಿ ಕೆಆರ್ಪೇಟೆ ಶಾಸಕ ಎಚ್.ಟಿ ಮಂಜು ಅವರನ್ನು ಗಮನಿಸದೇ ರೈಲಿನ ಮೂಲಕ ಮೈಸೂರು ಕಡೆಗೆ ತೆರಳಲು ಮುಂದಾದ ಸಚಿವರನ್ನು ಕಾರ್ಯಕರ್ತರು ಕೂಗಿ ಕರೆದರು. ಆ ವೇಳೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರೈಲು ನಿಲ್ಲಿಸಲು ಸೂಚಿಸಿದರು.ಈ ವೇಳೆ ಜೆಡಿಎಸ್ ಕಾರ್ಯಕರ್ತರು ರೈಲು ಬಳಿ ತೆರಳಿ ಬೆಳಗ್ಗಿನಿಂದ ಹುರಿ ಬಿಸಿಲನ್ನು ಲೆಕ್ಕಿಸದೆ ಮನವಿ ಸಲ್ಲಿಸಲು ಕಾಯ್ದು ನಿಂತಿದ್ದ ನಮ್ಮನ್ನು ಸೌಜನ್ಯಕ್ಕೂ ಮಾತನಾಡಿಸದೇ ತೆರಳುತ್ತಿದ್ದೀರಿ. ಒಂದೆರಡು ನಿಮಿಷವೂ ರೈಲ್ವೆ ನಿಲ್ದಾಣವನ್ನು ವೀಕ್ಷಿಸದೇ ತೆರಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಈ ವೇಳೆ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಬದಲಿಗೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಸೀಲನೆಗೆ ಆಗಮಿಸಿದ್ದೇನೆ ಎಂದು ಹೇಳಿ ಮೈಸೂರು ಕಡೆಗೆ ತೆರಳಿದರು.