ಬೇಲೂರು: ಪಟ್ಟಣದ ಐತಿಹಾಸಿಕ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ, ನಾಡ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿದ ಹಿನ್ನೆಲೆಯಲ್ಲಿ, ಚನ್ನಕೇಶವ ದೇಗುಲದ ಮಾಜಿ ಧರ್ಮದರ್ಶಿ ಯು.ಟಿ. ಕೇಶವಮೂರ್ತಿ ಅವರು ಎಲ್ಲಾ ಸಹಕರಿಸಿದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ದೇಗುಲ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ಅವರು ಎ-ಗ್ರೇಡ್ ದೇವಸ್ಥಾನದ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಅಪಾರ ಶ್ರಮ ವಹಿಸಿ, ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಿದರು.ಅಡ್ಡೆಗಾರರು ತೇರು ಕಟ್ಟುವ ಕಾರ್ಯದಿಂದ ಹಿಡಿದು, ತೇರು ಎಳೆಯುವವರೆಗೆ ಅತ್ಯಂತ ಶ್ರಮಪಟ್ಟು, ಶಿಸ್ತುಬದ್ಧವಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ವಿಶೇಷವಾಗಿ ಕಲ್ಯಾಣೋತ್ಸವದ ಸಂದರ್ಭದಲ್ಲಿ ಅವರ ಸೇವೆ ಅನನ್ಯ ವಾಗಿದೆ. ರಥೋತ್ಸವ ವೇಳೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ ವೆಂಕಟೇಶ್ ಅವರಿಗೂ ಹಾಗೂ ಅರ್ಚಕರಾದ ಶ್ರೀನಿವಾಸ್, ನರಸಿಂಹ ಪ್ರಿಯ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಚಾಚೂ ತಪ್ಪದೆ ನೆರವೇರಿದವು.
ಮಾಧ್ಯಮ ವರ್ಗವು ಜಾತ್ರಾ ಮಹೋತ್ಸವದ ಪ್ರಚಾರದಲ್ಲಿ ಮಹತ್ವದ ಪಾತ್ರವಹಿಸಿ, ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಆಗಮಿಸಲು ನೆರವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು. ನಾಡ ಪಟೇಲರು ಹಾಗೂ ಬಳ್ಳೂರು ನಾಡಗೌಡರು ಸಮಯಕ್ಕೆ ಸರಿಯಾಗಿ ಭಾಗವಹಿಸಿ, ನಾಡ ರಥೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.ಮುಂದಿನ ವರ್ಷಗಳಲ್ಲೂ ಇದೇ ರೀತಿಯ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.