ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಕಂಪನಿಗೆ ಸೇರಿದ ಗೋದಾಮಿನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಕೊಟ್ಯಂತರ ರು. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತುಮಕೂರು ರಸ್ತೆಯ ಅಡಕಮಾರನಹಳ್ಳಿಯ ಆಂಜನೇಯಸ್ವಾಮಿ ದೇವಾಲಯ ಬಳಿ ಪದ್ಮರಾಜ್ ಎಂಬುವರು ಖಾಸಗಿ ಕಂಪನಿಗೆ ಬಾಡಿಗೆ ನೀಡಿದ್ದ ಗೋದಾಮಿನಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿದೆ. ತಾಂತ್ರಿಕ ದೋಷದಿಂದ ಗೋಡಾನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

18 ವರ್ಷಗಳ ಹಿಂದೆ ವೇರ್ ಹೌಸ್ ನಿರ್ಮಾಣ ಮಾಡಲಾಗಿತ್ತು. ಇದನ್ನು ಜಿಯೋ ಮಾರ್ಟ್‌ನ ದಿನಸಿ ಸೇರಿದಂತೆ ಇತರೆ ವಸ್ತುಗಳ ದಸ್ತಾನು ಮಾಡಲು ಬಾಡಿಗೆಗೆ ಕೊಡಲಾಗಿತ್ತು. ಈ ಗೋದಾಮಿನಲ್ಲಿ 200ಕ್ಕೂ ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತಾರೆ. ಆದರೆ ಅದೃಷ್ಟವಾಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪದ್ಮರಾಜ್ ತಿಳಿಸಿದ್ದಾರೆ.

ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅಗ್ನಿ ದುರ್ಘಟನೆ ಸಂಭವಿಸಿದೆ. ಇದುವರೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿರಲಿಲ್ಲ. ಶಾರ್ಟ್‌ ಸೆಕ್ಯೂರ್ಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ದುರಂತದಿಂದ ₹18 ರಿಂದ 20 ಕೋಟಿ ನಷ್ಟವಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಈ ಉಗ್ರಾಣದಲ್ಲಿ ರಾತ್ರಿ 10.40 ಗಂಟೆಗೆ ಕಾಣಿಸಿಕೊಂಡ ಬೆಂಕಿ ಹೊತ್ತಿಕೊಂಡಿದೆ. ಗೋದಾಮಿನಲ್ಲಿದ್ದ ವಸ್ತುಗಳಿಗೆ ತಾಕಿದ ಪರಿಣಾಮ ಬೆಂಕಿ ತೀವ್ರತೆ ಹೆಚ್ಚಾಗಿದೆ. ಅಷ್ಟರಲ್ಲಿ ಗೋದಾಮಿನಲ್ಲಿದ್ದ ಕೆಲಸಗಾರು ಹೊರ ಬಂದ ಪರಿಣಾಮ ಪ್ರಾಣಪಾಯದಿಂದ ಸುರಕ್ಷಿತರಾಗಿದ್ದಾರೆ ಎಂದು ಪದ್ಮರಾಜ್ ವಿವರಿಸಿದ್ದಾರೆ.