ಅದ್ಧೂರಿಯಾಗಿ ಜರುಗಿದ ಸುತ್ತೂರು ಶ್ರೀ ಶಿವರಾತ್ರೀಶ್ವರ ರಥೋತ್ಸವ

KannadaprabhaNewsNetwork |  
Published : Feb 09, 2024, 01:48 AM IST
6 | Kannada Prabha

ಸಾರಾಂಶ

ಬೆಳಗ್ಗೆ 10.55ಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಮಾಜಿ ಸಚಿವ ಬಿ.ಎಸ್. ಯಡಿಯೂರಪ್ಪ, ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜೆ.ಸಿ. ಮಾಧುಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ 21 ಕುಶಾಲತೋಪುಗಳು ಸಿಡಿದವು. ಈ ವೇಳೆ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.

- ರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು- ರಥೋತ್ಸವಕ್ಕೆ ಜಾನಪದ ಕಲಾ ತಂಡಗಳ ಮೆರುಗು

----

ಬಿ. ಶೇಖರ್ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಅದ್ಧೂರಿಯಾಗಿ ನೆರವೇರಿತು.

ಸುತ್ತೂರು ಶ್ರೀ ಕ್ಷೇತ್ರದ ಕರ್ತೃಗದ್ದುಗೆ ಮುಂಭಾಗದಲ್ಲಿ ಜಮಾಯಿಸಿದ್ದ ಸಾವಿರಾರು ರಥದ ಮಿಣಿಯನ್ನು ಎಳೆದು ಹರಕೆ ತೀರಿಸಿದರು. ಅಲ್ಲದೆ, ರಥಕ್ಕೆ ಹಣ್ಣು- ಜವನ ಎಸೆದು ನಮಿಸುವ ಮೂಲಕ ತಮ್ಮ ಹರಕೆ ನೆರವೇರಿಸಿದರು.

ಗುರುವಾರ ಬೆಳಗ್ಗೆ 4ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 6ಕ್ಕೆ ಮಠದ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. ಬೆಳಗ್ಗೆ 10.30ಕ್ಕೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಪೂಜಾ ವಿಧಿವಿಧಾನ ಪೂರೈಸಲಾಯಿತು.

ನಂತರ ಬೆಳಗ್ಗೆ 10.55ಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಮಾಜಿ ಸಚಿವ ಬಿ.ಎಸ್. ಯಡಿಯೂರಪ್ಪ, ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜೆ.ಸಿ. ಮಾಧುಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ 21 ಕುಶಾಲತೋಪುಗಳು ಸಿಡಿದವು. ಈ ವೇಳೆ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.

ರಥೋತ್ಸವದಲ್ಲಿ ದೊಡ್ಡ ತೇರಿನೊಂದಿಗೆ ಚಿಕ್ಕತೇರೂ ಮುಂದೆ ಸಾಗಿತು. ಸುತ್ತೂರು ಮೂಲ ಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ರಥೋತ್ಸವವು ಕರ್ತೃಗದ್ದುಗೆಗೆ ಮರಳಿತು.

ಮೆರುಗು ತಂದ ಜಾನಪದ ಕಲಾತಂಡಗಳು

ರಥೋತ್ಸವದ ಮೆರವಣಿಗೆಗೆ ಸುಮಾರು 35 ಜಾನಪದ ಕಲಾತಂಡಗಳು ಮೆರುಗು ಹೆಚ್ಚಿಸಿದವು. ನಂದಿಧ್ವಜ, ನಗಾರಿ, ವೀರಭದ್ರನ ಕುಣಿತ, ನಾದಸ್ವರ, ತವಿಲ್, ಸ್ಯಾಕ್ಸೋಪೋನ್ ವಾದನ, ಪೂಜಾ ಕುಣಿತ, ಗಾರುಡಿ ಗೊಂಬೆಗಳು, ಡೊಳ್ಳು, ತಮಟೆ- ನಗಾರಿ, ಗೊರವರ ಕುಣಿತ, ಕೋಲಾಟ, ಜಾಂಜ್ ಮೇಳ, ಕಂಸಾಳೆ, ಹುಲಿವೇಷ, ಪಟದ ಕುಣಿತ, ದೊಣ್ಣೆವರಸೆ, ವೀರಮಕ್ಕಳ ಕುಣಿತವು ಭಕ್ತರನ್ನು ಮೋಡಿ ಮಾಡಿತು.

ಚಾಮುಂಡಿ ವೇಷದಲ್ಲಿದ್ದ ತಾಯೂರಿನ ಸಿದ್ದರಾಜು ಅವರ ಮರಗಾಲು ಗಮನ ಸೆಳೆದರೇ, ಸುತ್ತೂರು ಉಚಿತ ಶಾಲೆಯ ಮಕ್ಕಳು ವೀರಗಾಸೆ ಪ್ರದರ್ಶನವು ರಂಜಿಸಿತು. ಅಲ್ಲದೆ, ಮಹಾರಾಷ್ಟ್ರದ ಜಾನಪಥಕ್, ತಮಿಳುನಾಡಿನ ಕೋಲಾಟಂ, ಕರಗಾಟ್ಟಂ, ಕಾವಾಡಿಯಾಟಂ ಆಕರ್ಷಿಸಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ