ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯಿಂದ 1.64 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಮುಂಬೈ ಮೂಲದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯಿಂದ 1.64 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಮುಂಬೈ ಮೂಲದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ ಮೂಲದ ಪರೇಶ್ ಸೋನಿ (49) ಹಾಗೂ ಪ್ರವೀಣ್ ಅಲಿಯಾಸ್ ಪಪ್ಪು(44) ಬಂಧಿತರು. ಶ್ಯಾಮ್ ಹಾಗೂ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಆರೋಪಿಗಳು ಮೇ 16ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಕಚೇರಿಯೊಂದರಲ್ಲಿ ಈ ಕೃತ್ಯ ನಡೆದಿತ್ತು. ಬಂಧಿತರಿಂದ 1.64 ಕೋಟಿ ರು. ಮೌಲ್ಯದ 1.08 ಕೆ.ಜಿ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ.
ಚಿಕ್ಕಪೇಟೆಯ ಮಹೇಂದ್ರ ಕುಮಾರ್ ಡಿ. ಜೈನ್ ಎಂಬುವರು ಮೇ 16ರಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲೂ ಆಭರಣ ಖರೀದಿಸುವುದಾಗಿ ನಂಬಿಸಿ ಆರೋಪಿಗಳು ವಂಚಿಸಿದ್ದರು. ಮಹಾರಾಷ್ಟ್ರದ 15 ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿ ಆರೋಪಿಗಳು ಕೈಚಳಕ ತೋರಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಅಲ್ಲಿನ ಪೊಲೀಸರು ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ.
ಆರೋಪಿಗಳು ಮುಂಬೈನ ಜವಾರಿ ಬಜಾರ್ ಸೇರಿ ಹಲವು ಕಡೆ ಆಭರಣಗಳನ್ನು ಆರೋಪಿಗಳು ಮಾರಾಟ ಮಾಡಿದ್ದರು. ನಗರ್ತಪೇಟೆಯ ಮೆಹ್ತಾ ಗೋಲ್ಡ್ ಮಳಿಗೆಯ ಮಾರಾಟ ವಿಭಾಗದ ವ್ಯವಸ್ಥಾಪಕರಾಗಿ ಮಹೇಂದ್ರ ಕುಮಾರ್ ಜೈನ್ ಹಾಗೂ ಸಹಾಯಕ ವ್ಯವಸ್ಥಾಪಕರಾಗಿ ಗೌತಮ್ ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರದಲ್ಲಿ ಮಾಹಿ ಎಂಟರ್ಪ್ರೈಸಸ್ ಹೆಸರಿನಲ್ಲಿ ಆರೋಪಿ ಪರೇಶ್ ಸೋನಿ ಮಳಿಗೆ ತೆರೆದಿದ್ದರು. ಮೇ 16ರಂದು ಗೌತಮ್ಗೆ ಕರೆ ಮಾಡಿ ತಮ್ಮ ಸಂಸ್ಥೆಗೆ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂಬುದಾಗಿ ಹೇಳಿದ್ದರು. ಹೀಗಾಗಿ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕಚೇರಿಗೆ ಚಿನ್ನಾಭರಣಗಳ ಮಾದರಿಯನ್ನು ತಂದು ತೋರಿಸುವಂತೆ ಕೋರಿದ್ದರು. ಮಹೇಂದ್ರ ಕುಮಾರ್ ಜೈನ್ ಮತ್ತು ಸಿಬ್ಬಂದಿ ಪ್ರಕಾಶ್ ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಭರಣಗಳ ಜತೆಗೆ ಬಂದಿದ್ದರು.
ಫೋಟೋ ತೆಗೆಯುವ ನೆಪದಲ್ಲಿ ಚಿನ್ನ ದೋಚಿದ್ದರು:
ಆರೋಪಿಗಳಾದ ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್ ಅವರು ಚಿನ್ನಾಭರಣಗಳ ಮಾದರಿಯನ್ನು ನೋಡಿ, ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಆಭರಣಗಳನ್ನು ಕೊಂಡೊಯ್ದಿದ್ದರು. ಕೆಲ ಸಮಯ ಕಳೆದರೂ ಆರೋಪಿಗಳು ಕೋಣೆಯಿಂದ ಹೊರಕ್ಕೆ ಬಂದಿಲ್ಲ. ಕೋಣೆಯ ಒಳಗೆ ಹೋಗಿ ಪರಿಶೀಲಿಸಿದಾಗ, ಆಭರಣ ಸಹಿತ ಆರೋಪಿಗಳು ನಾಪತ್ತೆ ಆಗಿರುವುದು ಪತ್ತೆಯಾಗಿತ್ತು. ಬಳಿಕ ಠಾಣೆಗೆ ಬಂದು ಮಹೇಂದ್ರ ಕುಮಾರ್ ಡಿ. ಜೈನ್ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.